24 Oct 2018

#MeToo ಅಭಿಯಾನದ ಸುತ್ತ!!

#MeToo ಅಭಿಯಾನ ಏನನ್ನು ಸಾಧಿಸಿತು ಎಂಬ ಪ್ರಶ್ನೆ ಕೇಳಿದರೆ ಅದಕ್ಕೆ ಅನೇಕ ಉತ್ತರಗಳಿರಬಹುದು. ಲೈಂಗಿಕ ಶೋಷಣೆಯ ವಿವಿಧ ಸ್ವರೂಪಗಳನ್ನು ಅದು ತೆರೆದಿಟ್ಟಿತು. ಶೋಷಕರ ಮುಖವಾಡಗಳನ್ನು ಕಳಚಿತು. ಪುರುಷ ಪ್ರದಾನ ಸಾಮಾಜಿಕ ವೆವಸ್ಥೆಯಲ್ಲಿ ಹೆಣ್ಣು ಶೋಷಣೆಯ ಕೇಂದ್ರಬಿಂದುಯಾಗಿದ್ದಾಳೆ ಎಂಬುದೆಲ್ಲಾ ಉತ್ತರಗಳೇ. ಇವೆಲ್ಲಕ್ಕಿಂತ ಮುಖ್ಯವಾದುದು ಈ ಆಂದೋಲನ ವಿಶ್ವವ್ಯಾಪಿಯಾಗಿ ಗಂಡು ಮನಸ್ಸಿನ ನಿಜ ರೂಪವನ್ನು ತೆರೆದಿಟ್ಟದ್ದು.
ನನಗೆ ಈ ಸಂದರ್ಭದಲ್ಲಿ ಕುಮಾರವ್ಯಾಸ ಭಾರತದ ಸಭಾಪರ್ವದ ದ್ರೌಪದಿಯ ವಸ್ರ್ತಾಪಹರಣದ ಸನ್ನಿವೇಶ ನೆನಪಾಗುತ್ತಿದೆ. ಕಪಟ ದ್ಯೂತದಲ್ಲಿ ಪಾಂಡವರು ಸಕಲವನ್ನು ಕಳೆದುಕೊಂಡು ಕುರುರಾಜನ ಅಡಿಯಾಳುಗಳಾಗುತ್ತಾರೆ. ಯುಧಿಷ್ಠಿರ ಹೆಂಡತಿ ದ್ರೌಪದಿಯನ್ನೂ ಜೂಜಿಗೊಡ್ಡಿ ಸೋತಿರುತ್ತಾನೆ. ಅವನು ಮೊದಲಿಗೆ ತಾನು ಸೋತು ಆನಂತರ ಆಕೆಯನ್ನು ಸೋತಿರುತ್ತಾನೆ‌. ತಾನೇ ಮೊದಲು ಸೋತು ಆ ಬಳಿಕ ದ್ರೌಪದಿಯನ್ನು ಸೋಲಲು ಅವನಿಗೆ ಹಕ್ಕಿಲ್ಲ. ಇತ್ತ ದುರ್ಯೋಧನ ತನ್ನ ತಮ್ಮ ದುಶ್ಶಾಸನನಿಗೆ ಆಕೆಯನ್ನು ಎಳೆದು ತರುವಂತೆ ಆಜ್ಞಾಪಿಸುತ್ತಾನೆ. ಅಂತಃಪುರದಲ್ಲಿ ಕೆಳದಿಯರೊಡನೆ ಕುಳಿತಿದ್ದ ಅತ್ತಿಗೆ ದ್ರೌಪದಿಯಲ್ಲಿಗೆ ದಾಂಡಿಗನಂತೆ ಬರುವ ದುಶ್ಶಾಸನ, ಎದುರು ಸಿಕ್ಕ ಹೆಣ್ಣುಮಕ್ಕಳನ್ನೆಲ್ಲಾ ಒದ್ದು ಕೆಡವುತ್ತಾ ದ್ರೌಪದಿಯನ್ನು ತನ್ನ ಅತ್ತಿಗೆಯೆಂದೂ ಯೋಚಿಸದೆ ಆಶ್ಲೀಲವಾಗಿ ನಿಂದಿಸಿ ಕರೆಯುತ್ತಾನೆ‌. ಆಕೆ ಆ ಸಂದರ್ಭದಲ್ಲಿ ತಿಂಗಳಾದ ಹೆಣ್ಣು. ತಾನು "ಪುಷ್ಪವತಿಯಾಗಿದ್ದೇನೆ" ಎಂದು ದುಶ್ಶಾಸನನಲ್ಲಿ ಹೇಳಿಕೊಂಡರೂ ಕೇಳದೆ "ಪುಷ್ಪವತಿಯಾಗಿಲ್ಲಿ ಫಲವತಿಯಾಗು ನಡೆ ಅಲ್ಲಿ ಕುರುರಾಜಭವನದಲಿ" ಎಂದು ಆಕೆಯ ಮುಡಿಯನ್ನು ಹಿಡಿದು ಕ್ರೂರವಾಗಿ ಕುರುಸಭೆಗೆ ಎಳೆದು ತರುತ್ತಾನೆ‌. ಸಭಾ ಮಧ್ಯದಲ್ಲಿ ಹೆಣ್ಣೊಬ್ಬಳು ಅಸಹಾಯಕಳಾಗಿ ಕೈ ಮುಗಿಯುತ್ತಾ ಕಂಗಾಲಾಗಿ ನಿತ್ತಿದ್ದಾಳೆ. ಅವರೆದುರು ಆಕೆ " ಧರ್ಮರಾಜ ಮೊದಲು ತನ್ನ ತಾನು ಸೋತುಕೊಂಡು ನಂತರ ನನ್ನನ್ನು ಸೋತನೋ..? ಅಥವಾ ತಾನು ಸೋಲುವ ಮೊದಲು ನನ್ನನ್ನು ಸೋತು ಆ ಬಳಿಕ ಅವನು ಸೋತನೋ ...?" ಎಂದು ಬಹಿರಂಗವಾಗೇ ಪ್ರಶ್ನೆ ಎತ್ತುತ್ತಾಳೆ ಆದರೆ ಸಭಾಸದರೆಲ್ಲರೂ ಮೌನಕ್ಕೆ ಜಾರುತ್ತಾರೆ. ಒಂದು ಹೆಣ್ಣಿನ ಯಾತನಾಮಯ ಕೂಗು ಕೇಳಿಯೂ ಬಾಯಿಬಿಡದೆ ದುರ್ಯೋಧನನ ಅನ್ನದ ಋಣಕ್ಕಾಗಿ ಜಢಚೇತನರಾಗಿ ಕುಳಿತುಕೊಳ್ಳುತ್ತಾರೆ. ದ್ರೌಪದಿ ಹೇಳುತ್ತಾಳೆ " ಹಿರಿಯರಿಲ್ಲದ ಸಭೆಯದು ಮನುಷ್ಯರ ನೆರವಿ ಹಿರಿಯರು ಹಿರಿಯರಲ್ಲ ಯತಾರ್ಥ ಭಾಷಣಭೀತ ಚೇತನರು" ಎನ್ನುತ್ತಾಳೆ. "ಸ್ರ್ತೀಮತವನುತ್ತರಿಸಬಾರದೇ ಧರ್ಮಮಾರ್ಗದೊಳ್" ಎಂದು ಅರಚುತ್ತಾಳೆ. ಅವಳೆಷ್ಟೇ ಅರಚಿದರೂ ಪ್ರಶ್ನಿಸಿದರೂ ಸಭೆಯಲ್ಲಿ ಸೀರೆ ಸೆಳೆಯುವ ದುಷ್ಕೃತವನ್ನು ಅವರಾರಿಂದಲೂ ತಪ್ಪಿಸಲಾಗುವುದಿಲ್ಲ. ಆ ಮಹಾನುಭಾವರ ಜನ್ಮಕ್ಕೆ ನಾಚಿಕೆಯಾಗಬೇಕಲ್ಲವೇ..? ದ್ರೌಪದಿಯ ಆ ಪ್ರಶ್ನೆಗೆ ಇಂದಿಗೂ ಯಾರೂ ಉತ್ತರಿಸಿಲ್ಲ. ಉತ್ತರಿಸಬೇಕಾದವರು ಗಂಡಸರೇ ಅಲ್ಲವೇ...? ದ್ರೌಪದಿಯ ಆ ಪ್ರಶ್ನೆ ಎಲ್ಲ ಹೆಣ್ಣಮಕ್ಕಳದ್ದೂ ಆಗಿದೆ. ನಾವು ಈಗ ಅವರೆತ್ತುವ ಪ್ರಶ್ನೆಯ ಎದಿರು ನಿತ್ತು ಉತ್ತರಿಸಬೇಕಾಗಿದೆ. ಅಂದು ಕುರುಸಭೆಯಲ್ಲಿ ಗಂಡಸರು ಮೌನವಾಗಿದ್ದರು, ಇಂದು ಮಾತನಾಡಲಾರಂಭಿಸಿದ್ದಾರೆ‌. ಅಂದು ಮೌನವಾಗಿದ್ದು ಅನ್ಯಾಯವೆಸಗಿದರು. ಇಂದು ಬಾಯಿಬಿಟ್ಟು ಅತ್ಯಾಚಾರವೆಸಗುತ್ತಿದ್ದಾರೆ.
ಹೆಣ್ಣೊಬ್ಬಳು ಗಂಡಿನಿಂದ ತನ್ನಮೇಲಾದ ದುರ್ವರ್ತನೆಯನ್ನು ಹೇಳಿಕೊಂಡರೆ ಅದು ಈಗ ನುಂಗಲಾರದ ತುತ್ತಾಗಿದೆ. ಮೀ ಟೂ ಅಭಿಯಾನದಲ್ಲಿ ಪ್ರಶ್ನೆ ಕೇಳುವವರಿಗೆ ಉತ್ತರಿಸದೇ ನೋವು ತೋಡಿಕೊಂಡವರಿಗೆ ಸಂತೈಸದೆ ಅತ್ಯಂತ ಅನಾಗರೀಕವಾದ ಭಾಷೆಯಲ್ಲಿ ಹೆಣ್ಣನ್ನು ಅವಳ ಅಭಿವ್ಯಕ್ತಿಯನ್ನು ಹತ್ತಿಕ್ಕಲಾಗುತ್ತಿದೆ. ಅತ್ಯಾಚಾರವನ್ನು ಅವಳ ಮೇಲೆ ದೈಹಿಕ ದಾಳಿ ಮಾಡಿಯೇ ಮಾಡಬೇಕಿಲ್ಲ ಹೀಗೂ ಮಾಡಬಹುದು ಎಂಬುದನ್ನು ಬಹಳೇ ಜನ ತೋರಿಸಿಕೊಳ್ಳುತ್ತಿದ್ದಾರೆ‌. ಇದೂ ಹೆಣ್ಣಿನ ಮೇಲಾಗುತ್ತಿರುವ ಸಾಮೂಹಿಕ ಅತ್ಯಾಚಾರವೇ ಅಲ್ಲವೇ...? ಎರಡು ವರ್ಷಗಳ ಹಿಂದೆ ಈ ಆಂದೋಲನ ಆರಂಭವಾದ ಹೊತ್ತಿನಲ್ಲಿ ತಾವು ಅನುಭವಿಸಿದ ಲೈಂಗಿಕ ಶೋಷಣೆ ಕುರಿತು ಬರೆದಿದ್ದ ಲಾರಾ ಗಿಯಾನಿನೊ ತನ್ನ ಮೇಲೆ ನಡೆದ ಆನ್‌ಲೈನ್ ದಾಳಿಯ ತೀವ್ರತೆಯನ್ನು ವಿವರಿಸುವುದು ಹೀಗೆ: ‘ನಾನು ‘ಮೀ-ಟೂ’ ಎಂದು ಹೇಳಲೇಬಾರದಿತ್ತು. ನಾನು ಬಾಯಿ ಮುಚ್ಚಿಕೊಂಡಿರ
ಬೇಕಿತ್ತು ಅಂದುಕೊಂಡೆ’  ಇದು ಕೇವಲ ಲಾರಾಳ ಮಾತಲ್ಲ 'ಮೀ-ಟೂ' ಎಂದು ತನ್ನಮೇಲಾದ ದುರ್ವರ್ತನೆಯನ್ನು ಹೇಳಿಕೊಂ ಪ್ರತಿಯೊಬ್ಬ ಹೆಣ್ಣು ಮಗಳ ಅಭಿಪ್ರಾಯ. ಅವರ ನೋವಿನೊಂದಿಗೆ ನಿಲ್ಲಬೇಕಾದ ಈ ಪ್ರಪಂಚವೇ ಮತ್ತಷ್ಟು ನೋವು ನೀಡಲು ಆರಂಭಿಸಿದೆ. ತನುಶ್ರೀಯಿಂದ ಶ್ರುತಿ ಹರಿಹರನ್ ತನಕದ ಸಿನಿಮಾ ತಾರೆಗಳು ನತದೃಷ್ಟರು(?) ಏಕೆಂದರೆ ಅವರು ಕೆಲಸ ಮಾಡುತ್ತಿರುವ ಉದ್ಯಮದಲ್ಲಿ ‘ಅದೆಲ್ಲಾ ಮಾಮೂಲು. ಅದರಲ್ಲೇನು ವಿಶೇಷ’ ಎಂದು ಹೆಚ್ಚಿನವರು ಪ್ರಶ್ನಿಸುವಂಥ ಮನೋಭಾವವೊಂದು ವ್ಯಾಪಕವಾಗಿದೆ. ತನುಶ್ರೀ, ಸಂಗೀತ, ಶ್ರುತಿ ‘ಇದೇಕೆ ಮಾಮೂಲು ಸಂಗತಿಯಾಗಬೇಕು’ ಎಂದು ಪ್ರಶ್ನಿಸುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲೂ ನಾವು ಮುಂದಾಗುವುದಿಲ್ಲ. ಇದು ಸಂಭವಿಸಿದಾಗಲೇ ಏಕೆ ಹೇಳಲಿಲ್ಲ? ಆಗ ಏಕೆ ದೂರು ಕೊಡಲಿಲ್ಲ? ಇದೊಂದು ಬ್ಲ್ಯಾಕ್‌ಮೇಲ್ ತಂತ್ರ ಎಂಬ ತೀರ್ಮಾನಗಳಿಗೆ ಬಂದು ಚರ್ಚಿಸುವ ಪ್ರಕ್ರಿಯೆಯಲ್ಲಿ
ತೊಡಗಿಕೊಳ್ಳುತ್ತೇವೆ ಎಂತಹ ಹೀನಾಯ ಸಮಾಜ ನಮ್ಮದು.
ಮಹಿಳೆಯರು ತಮ್ಮ ವಿರುದ್ಧ ನಡೆದ ಲೈಂಗಿಕ ಶೋಷಣೆಯನ್ನು ತಡೆಯುವಲ್ಲಿ ಕಾನೂನುಗಳು ವಿಫಲವಾದವು, ಸಮಾಜ ವಿಫಲವಾಯಿತು. ಮುಖ್ಯವಾಹಿನಿಯ ಮಾಧ್ಯಮಗಳೂ ಗಮನಿಸಲಿಲ್ಲ ಅಥವಾ ತಮ್ಮ ಧ್ವನಿಯನ್ನು ಆಲಿಸಲು ಸಿದ್ಧವಿಲ್ಲ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳ ಮೊರೆ ಹೋದರು. ಹೇಳಿಕೊಳ್ಳುವುದಕ್ಕೆ ಒಂದಾದರೂ ವೇದಿಕೆಯಿದೆಯಲ್ಲ ಎಂಬುದು ಅವರ ಭಾವನೆಯಾಗಿರಬಹುದು. #MeToo ಟ್ರೆಂಡ್ ಆಯಿತು. ಆದರೆ ಆಮೇಲೆ ನಡೆದದ್ದೇನು? ಆಮೇಲೆ ನಡೆದದೆಲ್ಲ ಅವರ ಮೇಲೆಯೇ ವೈಯಕ್ತಿಕ ದಾಳಿ. ಶ್ರುತಿ ಹರಿಹರನ್ ರೊಂದಿಗೆ ನಿಂತು ಹೋರಾಟ ಮಾಡುವುದು ಒತ್ತಟ್ಟಿಗಿರಲಿ ಆಕೆಯದೇ ತಪ್ಪು ಎಂದು ಆಕೆಯ ಮೇಲೆ ಆನ್‌ಲೈನ್ ದಾಳಿ ಮಾಡುತ್ತಿದ್ದಾರೆ. ಅತ್ಯಂತ ಕೆಟ್ಟ ಪದಗಳಲ್ಲಿ ಆಕೆಯನ್ನು ನಿಂದುಸುತಿದ್ದಾರೆ. ಅಷ್ಟೇ ಏಕೇ ಆಕೆಯೊಂದಿಗೆ ನಿಂತು ಧೈರ್ಯ ಕೊಟ್ಟ ಜನಕ್ಕೂ ನಿಂದುಸುತ್ತಿದ್ದಾರೆ. ಪ್ರಕಾಶ್ ರೈ ಹೇಳಿದ್ದರಲ್ಲಿ ತಪ್ಪೇನಿತ್ತು? ಅರ್ಜುನ್ ಸರ್ಜಾ ಕ್ಷಮೆ ಕೇಳಬಹುದಿತ್ತು ಎಂದು ಅವರು ಹೇಳಿದಾಗ ಇಡೀ ಜಗತ್ತೇ ಅವರ ಮೇಲೆ ತಿರುಗಿಬಿತ್ತು. ಅರ್ಜುನ್ ಸರ್ಜಾ ತಪ್ಪು ಮಾಡಿದ್ದಾರೆ ಎಂದು ಅವರು ಎಂದು ಹೇಳಿರಲಿಲ್ಲ. ನಾನು ತಪ್ಪಾಗಿ ನಡೆದುಕೊಂಡಿದ್ದೇನೆ ಎಂಬ ಭಾವ ನಿಮ್ಮಲ್ಲಿ ಹುಟ್ಟಿದ್ದರೆ ಕ್ಷಮಿಸಿ ಅಂತ ಕ್ಷಮಾಪಣೆಯನ್ನು ಮುಂದಿಡುವುದು ಆರೋಗ್ಯವಂತ ಜೀವನದ ಲಕ್ಷಣ. ಸಿನಿಮಾದಲ್ಲಿ ಯಾವ ಕಾರಣಕ್ಕೋ ಯಾವ ಹೊತ್ತಿನಲ್ಲೋ ಯಾವುದೋ ಒಂದು ಸ್ಪರ್ಶ ಕೆಟ್ಟದು ಅಂತ ನಾಯಕಿಗೂ ಅನಿಸಿರಬಹುದು. ನಾಯಕನಿಗೂ ಅನಿಸಿರಬಹುದು. ಅದನ್ನು ಒಬ್ಬಾಕೆ ಹೇಳಿದಾಗ, ಹೌದೇ, ಹಾಗೇನಾದರೂ ಆಗಿದ್ದರೆ ಅದು ಉದ್ದೇಶಪೂರ್ವಕ ಅಲ್ಲ. ನನಗದು ಗೊತ್ತು ಆಗಲಿಲ್ಲ ಎಂದು ಬಿಡುವುದ್ಕಕೆ ಅಹಂಕಾರ ಯಾಕೆ ಅಡ್ಡಿಬರಬೇಕು?




ಶ್ರುತಿ- ಅರ್ಜುನ್ ಪ್ರಕರಣದಲ್ಲಿ ಯಾರು ನಿಜವೇಳುತ್ತಿದರೋ, ಯಾರು ಸುಳ್ಳು ಹೇಳುತ್ತಿದರೋ ಅದು ನಿರ್ಧಾರವಾಗುವ ಮೊದಲೇ ಆಕೆಯನ್ನು ಕೀಳುಮಟ್ಟದಲ್ಲಿ ನಿಂದುಸುವುದು ಎಷ್ಟು ಸರಿ? ಇಂದು ಶ್ರುತಿಗೆ ಆದದ್ದು ನಾಳೆ ನಮಗೂ ಆಗಬಹುದು. ಆನ್ಲೈನ್ ದಾಳಿ ನಡೆಯುತ್ತದೆ ಎಂದು ಆಕೆಗೆ ಗೊತ್ತಿದರು ಆಕೆ ದೈರ್ಯವಾಗಿ ತನ್ನ ನಿಲುವನ್ನು ವ್ಯಕ್ತ ಪಡಿಸಿದ್ದಾರೆ ಅದಕ್ಕೆ ನಾವು ಮೆಚ್ಚಬೇಕೆ ಹೊರತು ಆಕೆಯನ್ನು ನಿಂದಿಸುವುದಲ್ಲ. ಸತ್ಯ ಇಂದಲ್ಲ ನಾಳೆ ಹೊರಬರುತ್ತದೆ. ಅದು ತಿಳಿಯುವ ಮುನ್ನವೇ ಆಕೆಯ ಧ್ವನಿಯನ್ನು ಅಡಗಿಸುವುದು ಸರಿಯಲ್ಲ. ಇದರಿಂದ ಮುಂದೆ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಬರುವ ಮಂದಿಗೆ ಮತ್ತಷ್ಟು ಭಯವಾಗುತ್ತದೆ ವಿನಃ ಧೈರ್ಯ ಬರುವುದಿಲ್ಲ.
ಮೀ ಟೂ ವಿರೋಧಿಸುವವರೆಲ್ಲರೂ ಒಮ್ಮೆ ಕಾಂಡೇಕರರ 'ಯಯಾತಿ' ಕಾದಂಬರಿಯನ್ನೋದಬೇಕು. ಆಗ ಗೊತ್ತಾಗುತ್ತದೆ ಯಯಾತಿಯ ಲಂಪಟತನ ತನ್ನಲ್ಲೂ ಇರುವುದು‌. ಯಯಾತಿ ನಮ್ಮ ಒಳಗಿನ ಲಂಪಟತನದ ಪರಾಮರ್ಷೆಗೊಂದು ದೊಂದಿ. ಹೆಣ್ಣುಮಕ್ಕಳೆಲ್ಲರೂ ಅಹಲ್ಯೆಯರಾಗಿರಬೇಕು ತನ್ನದಲ್ಲದ ತಪ್ಪಿಗೂ ತಾವೇ ತಪ್ಪಿತಸ್ಥೆಯರೆಂದು ಒಪ್ಪಿಕೊಳ್ಳಬೇಕು. ಸೀತೆಯಂತೆ ಬಂದದ್ದನ್ನೆಲ್ಲಾ ಆದದ್ದನ್ನೆಲ್ಲಾ ಅನುಭವಿಸಬೇಕು. ಕುಮಾರವ್ಯಾಸನ ದ್ರೌಪದಿಯಂತೆ ಅವಳು ಈ ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಕೇಳಬಾರದು ಪ್ರತಿಭಟಿಸಬಾರದು "ಸ್ರ್ತೀಮತವನುತ್ತರಿಸಬಾರದೇ ಧರ್ಮಮಾರ್ಗದೊಳ್" ಎಂದು. ಯಾಕೆಂದರೆ ಇದು ಪ್ರಜಾ ಪ್ರಭುತ್ವವಲ್ಲ. ಪುರುಷ ಪ್ರಭುತ್ವ.
ಸಾಮಾಜಿಕ ಜಾಲತಾಣಗಳಲ್ಲಿರುವ ಹೆಚ್ಚಿನವರು ಸಂವೇದನಾಶೀಲತೆಯನ್ನು ಕಳೆದುಕೊಂಡಂತೆ ಆರ್ಭಟಿಸಿದ್ದು ಈ ತಾಣಗಳು ಗಂಡು ಮನಸ್ಸಿನ ಆಡೊಂಬಲವಾಗಿರುವುದನ್ನು ಸೂಚಿಸಿದವು. ಶ್ರುತಿ ಹರಿಹರನ್ ಪ್ರಕರಣದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳಲ್ಲೂ ಇದು ಪ್ರತಿಫಲಿಸಿತು. ಇನ್ನೂ ದುರದೃಷ್ಟಕರ ಸಂಗತಿಯೆಂದರೆ ನಿರ್ಭಯಾ ಪ್ರಕರಣ ನಡೆದಾಗ ಅತ್ಯಾಚಾರಿಗಳನ್ನು, ಲೈಂಗಿಕ ಶೋಷಕರನ್ನು ಗಲ್ಲಿಗೇರಿಸಬೇಕೆಂದು ಗಂಟಲು ಹರಿದು
ಕೊಳ್ಳುತ್ತಿದ್ದವರೇ ತಮ್ಮ ಲೈಂಗಿಕ ಶೋಷಣೆಯ ಕಥೆ ಹೇಳಿದವರ ಮೇಲೆ ಅತ್ಯಾಚಾರಿಗಳಂತೆ ಏರಿ ಹೋದರು. ಇಬ್ಬರು ನಾಯಕ ನಟರ ದೈವಭಕ್ತಿಯಿಂದ ಆರಂಭಿಸಿ ರಾಜಕೀಯ ಆಯ್ಕೆಗಳ ತನಕ ಎಲ್ಲವೂ ಅವರ ನಿರಪರಾಧಿತ್ವದ ಸಂಕೇತಗಳಂತೆಯೂ ಆರೋಪ ಹೊರಿಸಿದವರ ಹೆಣ್ತನವೇ ಅವರ ಆರೋಪ ಸುಳ್ಳಾಗಿರುವುದಕ್ಕೆ ಸಾಕ್ಷಿ ಎಂಬಂತೆಯೂ ಬಿಂಬಿಸಲಾಯಿತು.
ಎಲ್ಲಾ ಸಂಘಟಿತ ಉದ್ಯಮಗಳಿಗೂ ಅನ್ವಯಿಸುವ ವಿಶಾಖಾ ಮಾರ್ಗದರ್ಶಿ ಸೂತ್ರಗಳ ಅನ್ವಯ ಇರಲೇಬೇಕಾದ ಆಂತರಿಕ ದೂರು ಸಮಿತಿಯನ್ನು ಯಾವ ಸಿನಿಮಾ ನಿರ್ಮಾಣ ಕಂಪನಿಯೂ ಹೊಂದಿಲ್ಲ ಎಂಬ ವಿಚಾರವನ್ನು ಯಾರೂ ಎತ್ತಲಿಲ್ಲ. ಅಂದೇ ದೂರು ಕೊಡಬೇಕಾಗಿತ್ತು ಎಂಬ ಕಾನೂನಿನ ವಾದ ಮಂಡಿಸುವವರಿಗೂ ಇದು ಹೊಳೆಯಲಿಲ್ಲ. ಅಷ್ಟೇಕೆ ಈ ಮಹಿಳೆಯರಿಬ್ಬರಿಗೆ ಸಂಶಯದ ಲಾಭವನ್ನು ಕೊಡುವುದಕ್ಕೂ ಒಪ್ಪಲಾರದವರೇ ಹೆಚ್ಚಿದ್ದರು. ಇವೆಲ್ಲವೂ ಕೊನೆಗೂ ಸೂಚಿಸುವುದು ಅದನ್ನೇ. ನಾವು ಬೀದಿಗಳನ್ನು ಮಹಿಳೆಯರಿಗೆ ಸುರಕ್ಷಿತವಾಗಿಡುವುದರಲ್ಲಿ ಸೋತಂತೆ, ಕೆಲಸ ಸ್ಥಳಗಳನ್ನು ಲಿಂಗ ಅಸಮಾನತೆಯಿಂದ ಮುಕ್ತಗೊಳಿಸುವುದಕ್ಕೆ ಸೋತಂತೆ, ಸಾಮಾಜಿಕ ಜಾಲತಾಣಗಳನ್ನು ಮಹಿಳೆಯ ಮುಕ್ತ ಅಭಿವ್ಯಕ್ತಿಗೆ ನಿಲುಕಲಾರದ ಸ್ಥಳವನ್ನಾಗಿ ಮಾಡಿಬಿಟ್ಟಿದ್ದೇವೆ ಅಷ್ಟೇ. ಆದರೂ ಮಹಿಳೆಯರು ಸೋತು ಗೆದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಹುಸಂಖ್ಯೆಯಲ್ಲಿರುವ ಗಂಡಸರು ನಿಜಕ್ಕೂ ಎಂಥಾ ಮನಃಸ್ಥಿತಿಯವರು ಎಂದು ಅವರ ತಾಯಿ, ಅಕ್ಕ, ತಂಗಿ, ಪತ್ನಿ ಮತ್ತು ಮಕ್ಕಳೆದುರೇ ಅನಾವರಣಗೊಳಿಸಿದ್ದಾರೆ. ಅಷ್ಟರ ಮಟ್ಟಿಗೆ #MeToo ಯಶಸ್ವಿಯಾಗಿದೆ.

close