27 Jul 2021

ಬಸವರಾಜ ಬೊಮ್ಮಾಯಿ - ಕರ್ನಾಟಕ ರಾಜ್ಯದ ೨೩ನೇ ಮುಖ್ಯಮಂತ್ರಿ

ಬೊಮ್ಮಾಯಿ ಎಂದರೆ ರಾಜ್ಯಕ್ಕೆ ಹಿತ, 

ಬಿಜೆಪಿಗೆ ಹಿತಮಿತ, 

ಕಾಂಗ್ರೆಸ್ ಗೆ ಅಹಿತ.


ಬಸವರಾಜ ಬೊಮ್ಮಾಯಿ


ರಾಜ್ಯದ ಹಿತದೃಷ್ಟಿಯಿಂದ ಮಾತ್ರವಲ್ಲ ಬಿಜೆಪಿಯ ಭವಿಷ್ಯದ ದೃಷ್ಟಿಯಿಂದಲೂ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಒಳ್ಳೆಯ ಆಯ್ಕೆ. ಕಾಂಗ್ರೆಸ್ ಪಕ್ಷದ ದೃಷ್ಟಿಯಿಂದ ಪ್ರಹ್ಲಾದ ಜೋಷಿ, ಬಿ.ಎಲ್.ಸಂತೋಷ್, ವಿಶ್ವೇಶ್ವರ ಹೆಗಡೆ ಕಾಗೇರಿ ಇಲ್ಲವೇ ಯಾರಾದರೂ ಲಿಂಗಾಯತೇತರ ನಾಯಕ ಮುಖ್ಯಮಂತ್ರಿ ಸ್ಥಾನಕ್ಕೆ ಒಳ್ಳೆಯ ಆಯ್ಕೆಯಾಗಿರುತ್ತಿತ್ತು, ಬಸವರಾಜ ಬೊಮ್ಮಾಯಿ ಅಲ್ಲ. 

 

ರಾಜ್ಯಕ್ಕೆ ಒಳ್ಳೆಯದು ಮಾಡಬೇಕೆಂಬ ಸದ್ಬುದ್ದಿಯಿಂದ ಬಿಜೆಪಿ ಹೈಕಮಾಂಡ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ  ಆಯ್ಕೆ ಮಾಡಿರಲಾರದು. ಅನಿವಾರ್ಯವಾಗಿ ಬಿ.ಎಸ್.ಯಡಿಯೂರಪ್ಪನವರ ಬಿಗಿಪಟ್ಟಿಗೆ 56 ಇಂಚಿನ ಎದೆ ಬಾಗಿದೆ ಅಷ್ಟೆ. 


ಜೋಷಿ, ಹೆಗಡೆ, ಸಂತೋಷ್ ಮೊದಲಾದ ಬ್ರಾಹ್ಮಣ ನಾಯಕರು, ತಪ್ಪಿದರೆ ಸಂಘ ಪರಿವಾರದಿಂದ ಬಂದ ಲಿಂಗಾಯತೇತರ ನಾಯಕರು ಅದೂ ತಪ್ಪಿದರೆ ಯಡಿಯೂರಪ್ಪನವರಿಗೆ ಆತ್ಮೀಯರಲ್ಲದ ಲಿಂಗಾಯತರಲ್ಲಿ ಯಾರನ್ನಾದರೂ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಬೇಕೆಂದು ಕೇಶವಕೃಪಾದ ಪಾರುಪತ್ತೆಗಾರರು ಖಂಡಿತ  ಬಯಸಿರುತ್ತಾರೆ. ಆದರೆ ಭವಿಷ್ಯದಲ್ಲಿ ಅದರಿಂದಾಗುವ ಪರಿಣಾಮದ ಬಗ್ಗೆ ಯೋಚಿಸಿ ಹಿಂದಡಿ ಇಟ್ಟಿದ್ದಾರೆ. ಈ ಮೂರು ಗುಂಪುಗಳಲ್ಲಿ ಯಾರನ್ನೂ ಮಾಡಿದ್ದರೂ ಯಡಿಯೂರಪ್ಪನವರು ಸುಮ್ಮನೆ ಕೂರುತ್ತಿರಲಿಲ್ಲ.


ಒಂದೊಮ್ಮೆ  ಜೋಷಿ,ಹೆಗಡೆ,ಸಂತೋಷ್ ಮೊದಲಾದವರಲ್ಲಿ ಯಾರನ್ನಾದರೂ ಮುಖ್ಯಮಂತ್ರಿ ಮಾಡಿದ್ದರೆ ಈ ಸರ್ಕಾರ ಬಹಳ ದಿನ ಬಾಳುತ್ತಿರಲಿಲ್ಲ, ಮಧ್ಯಂತರ ಚುನಾವಣೆ ಅನಿವಾರ್ಯವಾಗುತ್ತಿತ್ತು. ಅಂತಹ ಸಂದರ್ಭದಲ್ಲಿ   ಸಂಖ್ಯಾಬಲ ಇಲ್ಲದ ಬ್ರಾಹ್ಮಣ ನಾಯಕರ ನೇತೃತ್ವದಲ್ಲಿ ಚುನಾವಣೆಯನ್ನು  ಎದುರಿಸಿದರೆ ಪರಿಣಾಮ ಏನಾಗಬಹುದೆಂದು ಊಹಿಸಲಾಗದಷ್ಟು ಸಂಘ ಪರಿವಾರದ ನಾಯಕರು ದಡ್ಡರಲ್ಲ. ಅವರೇನು ನಮ್ಮ ಟಿವಿ ಚಾನೆಲ್ ಗಳ ರಂಗ,ಪೆಂಗರೇ? ಈ ಕಾರಣದಿಂದಾಗಿ ಈ ತ್ರಿಮೂರ್ತಿಗಳ ಹೆಸರು ಹೈಕಮಾಂಡ್ ಪಟ್ಟಿಯಿಂದ ಎಂದೋ ಡಿಲೀಟ್ ಆಗಿತ್ತು. 


ಪ್ರಾರಂಭದಲ್ಲಿ ಯಡಿಯೂರಪ್ಪನವರು ಪ್ರಹ್ಲಾದ ಜೋಷಿ ಅವರ ಹೆಸರನ್ನೂ ಸೂಚಿಸಿದ್ದರಂತೆ.  ಇತ್ತೀಚಿನ ದಿನಗಳಲ್ಲಿ ಸೀರಿಯಸ್ಸಾಗಿ ಸೋಷಿಯಲ್ ಎಂಜನಿಯರಿಂಗ್ ನಡೆಸುತ್ತಿರುವ ಬಿಜೆಪಿ ಹೈಕಮಾಂಡ್ ಸದ್ಯಕ್ಕೆ ಎಲ್ಲಿಯೂ ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡಬಾರದೆಂದು ತೀರ್ಮಾನಿಸಿದೆಯಂತೆ. ಆದ್ದರಿಂದ ಈ ಹೆಸರುಗಳು ನಮ್ಮ ಮಾಧ್ಯಮ ಮಾಲೀಕರು ಮತ್ತು ಸಂಪಾದಕರ ಗುಪ್ತ ಆಶಯದಂತೆ ಟಿವಿ ಪರದೆಗಳಲ್ಲಿ, ಪತ್ರಿಕೆಯ ಮುಖಪುಟಗಳಲ್ಲಿ ರಾರಾಜಿಸಿದೆ ಅಷ್ಟೆ.


ಬಿಜೆಪಿ ಹೈಕಮಾಂಡ್ ಗೆ ಇದ್ದ ಎರಡನೇ ಆಯ್ಕೆ ಲಿಂಗಾಯತೇತರ ಅಂದರೆ ಒಕ್ಕಲಿಗ, ಹಿಂದುಳಿದ ಜಾತಿ ಇಲ್ಲವೇ ದಲಿತ ಸಮುದಾಯದವರನ್ನು ಮುಖ್ಯಮಂತ್ರಿ ಮಾಡುವುದು. ಆದರೆ ಯಡಿಯೂರಪ್ಪನವರ ಪರವಾಗಿ ಎದ್ದುನಿಂತ  ಲಿಂಗಾಯತ ಸ್ವಾಮಿಗಳ ಕೂಗು, ಯಡಿಯೂರಪ್ಪನವರ ಕಣ್ಣೀರಿಗೆ ಹರಿದ ಅನುಕಂಪದ ಹೊಳೆ, ಮಾಧ್ಯಮಗಳಲ್ಲಿಯೂ  ಪ್ರಕಟ/ಪ್ರಸಾರವಾದ ಯಡಿಯೂರಪ್ಪನವರ ಪರವಾದ ವರದಿಗಳನ್ನು ನೋಡಿ ಬಿಜೆಪಿ ಹೈಕಮಾಂಡ್ ಈ ಆಯ್ಕೆಯನ್ನೂ ಕೈಬಿಟ್ಟಿದೆ.


 ಕೊನೆಯ ಆಯ್ಕೆಯಾಗಿ ಕೊನೆಕ್ಷಣದ ವರೆಗೆ ಯಡಿಯೂರಪ್ಪನವರ ಆತ್ಮೀಯ ವಲಯದಲ್ಲಿ ಇಲ್ಲದ ಲಿಂಗಾಯತ ನಾಯಕರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಬಿಜೆಪಿ ಹೈಕಮಾಂಡ್ ಪ್ರಯತ್ನ ಮಾಡಿದೆ. ಸಂಭಾವ್ಯ ಲಿಂಗಾಯತ ಅಭ್ಯರ್ಥಿಗಳ ಪಟ್ಟಿಯಲ್ಲಿ ಬೊಮ್ಮಾಯಿಯೊಬ್ಬರನ್ನು ಹೊರತುಪಡಿಸಿ ಉಳಿದೆಲ್ಲ ಲಿಂಗಾಯತ ನಾಯಕರು (ಯತ್ನಾಳ್, ಬೆಲ್ಲದ, ನಿರಾಣಿ,ಮಾಧುಸ್ವಾಮಿ), ಒಂದಲ್ಲ ಒಂದು ಸಂದರ್ಭದಲ್ಲಿ ಯಡಿಯೂರಪ್ಪನವರ ವಿರುದ್ದ ದನಿ ಎತ್ತಿ ಎದುರು ಹಾಕಿಕೊಂಡವರು.


ಬಸವರಾಜ ಬೊಮ್ಮಾಯಿ ಮಾತ್ರ ಪ್ರಾರಂಭದಿಂದಲೂ ಯಡಿಯೂರಪ್ಪನವರ ನಿಷ್ಠಾವಂತ ಅನುಯಾಯಿಯಾಗಿ ನಡೆದುಕೊಂಡವರು. ಹೀಗಾಗಿ ಲಿಂಗಾಯತರನ್ನು ಮುಖ್ಯಮಂತ್ರಿಯಾಗಿ ಮಾಡುವುದನ್ನು ವಿರೋಧಿಸಿದ್ದ ಯಡಿಯೂರಪ್ಪನವರು ಕೊನೆಗೆ ಬೊಮ್ಮಾಯಿ ಹೆಸರಿಗೆ ರಾಜಿಯಾಗಿದ್ದಾರೆ. ಇದನ್ನು ಒಪ್ಪಿಕೊಳ್ಳದೆ ಬಿಜೆಪಿ ಹೈಕಮಾಂಡ್ ಗೆ ಬೇರೆ ದಾರಿ ಇರಲಿಲ್ಲ.   ಸಂಘ ಪರಿವಾರದಿಂದ ಬಂದವರಲ್ಲ ಎನ್ನುವುದಷ್ಟೇ ಬೊಮ್ಮಾಯಿ ಬಗ್ಗೆ ಇರುವ ಏಕೈಕ ಆಕ್ಷೇಪವಾಗಿತ್ತು . ಅಷ್ಟಕ್ಕೆ ಬಿಜೆಪಿ ಹೈಕಮಾಂಡ್ ಹೊಂದಾಣಿಕೆ ಮಾಡಿಕೊಳ್ಳಲೇ ಬೇಕಾಯಿತು. ವಾಸ್ತವದಲ್ಲಿ ಲಿಂಗಾಯತ ಸ್ವಾಮಿಗಳ ಪ್ರತಿರೋಧದ ನಿಜವಾದ ಫಲಾನುಭವಿ ಬಸವರಾಜ ಬೊಮ್ಮಾಯಿ.


ಬಿ.ಎಸ್.ಯಡಿಯೂರಪ್ಪ ಮತ್ತು ಸಂಘ ಪರಿವಾರದ ನಡುವಿನ ಹಗ್ಗ ಜಗ್ಗಾಟದಲ್ಲಿ ಸಿಕ್ಕಿಹಾಕಿಕೊಳ್ಳದೆ ಇದ್ದರೆ ಬಸವರಾಜ ಬೊಮ್ಮಾಯಿ ಅವರಿಗೆ ಒಳ್ಳೆಯ ಆಡಳಿತ ನೀಡುವ ಬುದ್ದಿಶಕ್ತಿ ಮತ್ತು ಅನುಭವ ಇದೆ. ವಿಧಾನಮಂಡಲದಲ್ಲಿ ವಿರೋಧ ಪಕ್ಷದ ಮುಖ್ಯವಾಗಿ ಸಿದ್ದರಾಮಯ್ಯನವರ ವಾಗ್ದಾಳಿಯನ್ನು ಅನೇಕಬಾರಿ ಅವರದೇ ರೀತಿಯಲ್ಲಿ  ಬೊಮ್ಮಾಯಿಯವರು ಅಂಕಿಅಂಶಗಳನ್ನು ಮುಂದೊಡ್ಡಿ ತರ್ಕದ ಪಟ್ಟು ಹಾಕಿ ಸಮರ್ಥವಾಗಿ ಎದುರಿಸಿದ್ದಾರೆ. ಹಣಕಾಸು ಸಚಿವರಲ್ಲದೆ ಇದ್ದರೂ ಜಿಎಸ್ ಟಿ ಕೌನ್ಸಿಲ್ ನಲ್ಲಿ ಅವರೇ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರು. ಸದ್ಯ ಕಳಂಕಗಳ ಕಪ್ಪು ಚುಕ್ಕೆಗಳಿಲ್ಲ, ನಡವಳಿಕೆಯಲ್ಲಿ ಘನತೆ ಇದೆ.  ಹೇಳಲೇ ಬೇಕಾದ ಕೊನೆಯ ಮಾತೆಂದರೆ ಬಿಜೆಪಿಯಲ್ಲಿದ್ದರೂ ಇಲ್ಲಿಯ ವರೆಗೆ ಕೋಮುವಾದಿ ಅಲ್ಲವಾದರೂ ಮತಾಂತರಿಗಳು ಹೆಚ್ಚು ಮತನಿಷ್ಟರಾಗಿರುವುದನ್ನು ಅನುಭವ ಹೇಳುತ್ತಿದೆ.


(ಕಳೆದ ನಾಲ್ಕೈದು ದಿನಗಳಲ್ಲಿ ಮುಖ್ಯಮಂತ್ರಿ ಯಾರಾಗಬಹುದೆಂಬ ಗೆಳೆಯರ ಪ್ರಶ್ನೆಗೆ ಖಾಸಗಿಯಾಗಿ ನಾನು ಹೇಳಿದ್ದ ಹೆಸರು ಬಸವರಾಜ ಬೊಮ್ಮಾಯಿ. ನಾನು ಇದನ್ನು ಬರೆಯಲು ಹೋಗಿರಲಿಲ್ಲ.  ನನಗೆ ಯಾರೂ ಈ ಹೆಸರನ್ನು ಕಿವಿಯಲ್ಲಿ ಬಂದು ಹೇಳಿರಲಿಲ್ಲ. ಮತ್ತೆ ಹೇಗೆ ಆ ಹೆಸರು ಎಂದು ಕೇಳಿದರೆ ಅವರಿಗೆ ಮೇಲಿನ ಬರಹ ಓದಿರಿ ಎಂದಷ್ಟೇ ಹೇಳಬಲ್ಲೆ.   )

-ಅಮಿನ್ಮಟ್ಟು 

13 Jul 2021

'ಅಕ್ಕಯ್' ಎಂಬ 'ಅವಳ' ಕಥೆ (Her-Story )| Akkai biography| Akkai book in Kannada

Akkai Biography

 

" Everyone is handicapped in some way "

        ತನ್ನ ಎಂಟನೇ ವಯಸ್ಸಿನಲ್ಲಿ ಬಹಳ ಇಷ್ಟಪಟ್ಟು ಹುಡುಗಿಯರೊಂದಿಗೆ ಕುಂಟೆಬಿಲ್ಲೆ ಆಡುತ್ತಿದ್ದ ಜಗದೀಶ (ಅಕ್ಕಯ್) ಎಂಬ ಹುಡುಗನನ್ನು ಅವರ ಅಪ್ಪ ಕೋಪದಿಂದ ಧರಧರನೆ ಮನೆಗೆ ಎಳೆದೊಯ್ದು ದಂಡಿಸಿ, ಒಲೆಯ ಮೇಲೆ ಕುದಿಯುತ್ತಿದ್ದ ಬಿಸಿ ನೀರನ್ನು ಸುರಿದು ಇನ್ನುಮೇಲೆ ಆ ಆಟವನ್ನು ಆ ಹುಡುಗಿಯರೊಂದಿಗೆ ಆಡಲೇಬಾರದು ಎಂಬ ಕ್ರೌರ್ಯ ಮೆರೆದರು. ಆದರೆ ಆತ ತಾನು ಹುಡುಗಿಯಾಗಬೇಕೆಂದೇ ಬಯಸಿದ್ದ.ಗೆಜ್ಜೆ ತೊಟ್ಟು, ಅಮ್ಮನ ಸೀರೆ ಉಟ್ಟು ಸಿಂಗಾರ ಮಾಡಿಕೊಳ್ಳುತ್ತಿದ್ದ. ಟವಲ್ ತೊಟ್ಟು ಉದ್ದ ಕೂದಲಿನವಳೆಂದು ನಟಿಸುತ್ತಿದ್ದ.


ಇದನ್ನು ನೆನಪಿಟ್ಟುಕೊಳ್ಳಿ ...


ಹಾಗೆಯೇ ತನ್ನ ಎಂಟನೇ ವಯಸ್ಸಿಗೆ ಕಣ್ಣುಗಳನ್ನು ಕಳೆದುಕೊಂಡ ಡೇವಿಡ್ ಹಾರ್ಟ್ ಮನ್ ಎಂಬ ಹುಡುಗ ಡೈನಿಂಗ್ ಟೇಬಲ್ ಮುಂದೆ ಕೂತು 'ಅಪ್ಪ ನಾನು ಡಾಕ್ಟರ್ ಆಗಬೇಕು' ಎಂದ. ಅದಕ್ಕೆ ಅವರಪ್ಪ ಫ್ರೆಡ್ ಹಾರ್ಟ್ ಮನ್ ' ನೀನು ಡಾಕ್ಟರ್ ಆಗಬಹುದು ಎಂದು ಯೋಚಿಸುತ್ತೀಯಾದರೆ ಖಂಡಿತಾ ಆಗುತ್ತೀಯ' ಎಂದು ಹೇಳಿದ. ಇಡೀ ಕುಟುಂಬವೇ ಅವನ ಬೆಂಬಲಕ್ಕೆ ನಿಂತಿತು. ಶಾಲೆಗಳಲ್ಲಿ ಅಡ್ಮಿಶನ್ ಕೊಡಲು ಹಿಂಜರಿದಿದ್ದ , ಮೆಡಿಕಲ್ ಸೀಟ್ ಕೊಡಲು ನಿರಾಕರಿಸಿದ್ದ ದಿನಗಳನ್ನೆಲ್ಲ ಮೆಟ್ಟಿನಿಂತ  ಡೇವಿಡ್ ಹಾರ್ಟ್‌ಮನ್ ಎಂಬ 26 ವರ್ಷದ ಫಿಲೆಡೆಲ್ಫಿಯನ್ ಯುವಕನೊಬ್ಬನಿಗೆ 1975 ರ ಮೇ ತಿಂಗಳ ಒಂದು ದಿನ ಅಮೇರಿಕದ ಟೆಂಪಲ್ ಯೂನಿವರ್ಸಿಟಿಯು ಮೆಡಿಕಲ್ ಡಿಗ್ರಿಯನ್ನು ಪ್ರದಾನ ಮಾಡಿತು. ಆ ಮೂಲಕ ಆತ ಅಮೇರಿಕದ ಮೊದಲ Blind Doctor ಎನಿಸಿಕೊಂಡ. ಹತ್ತು ಸಾವಿರ ಜನ ನೆರೆದಿದ್ದ ಸಭಾಂಗಣದಲ್ಲಿ ಗೆಳೆಯರು , ಕುಟುಂಬಸ್ಥರು, ಪ್ರೊಫೆಸರ್ ಗಳು, ವಿವಿಯ ಸಿಬ್ಬಂದಿ ಎಲ್ಲರ ಕೈಗಳು ಚಪ್ಪಾಳೆ ತಟ್ಟುತ್ತಿದ್ದರೆ ಕಣ್ಣುಗಳಲ್ಲಿ ನೀರಾಡುತ್ತಿದ್ದವು. 


ಡೇವಿಡ್ ತನ್ನ ಆಸೆಯನ್ನು ಹೇಳಿದಾಗ ಸಿಕ್ಕ ಪ್ರೋತ್ಸಾಹಕ್ಕೂ ಜಗದೀಶ ಎಂಬ ಹುಡುಗ ತಾನು ಹುಡುಗಿಯಾಗಬೇಕೆಂಬ ಆಸೆಯನ್ನು  ಪರೋಕ್ಷವಾಗಿ ಹೊರಹಾಕಿದಾಗ ಸಿಕ್ಕ ಪ್ರತಿಕ್ರಿಯೆಗೂ ಎಷ್ಟು ವ್ಯತ್ಯಾಸವಿದೆ ಅಲ್ಲವೆ ? ಡೇವಿಡ್ ನ ಮಾತುಗಳಲ್ಲೇ ಹೇಳುವುದಾದರೆ ' Everyone is handicapped in some way ' ಆದರೂ ಹೆತ್ತವರಿಂದ ಅವನಿಗೆ ಸಿಕ್ಕ ಪ್ರೋತ್ಸಾಹಕ್ಕೂ ಜಗದೀಶ ಎಂಬ ಹುಡುಗ ನಾನು ನಿಜವಾಗಿಯೂ ಅಕ್ಕಯ್ ಆಗಲು ಹವಣಿಸುವದಕ್ಕೆ ಸಿಕ್ಕ ಪ್ರತಿಕ್ರಿಯೆಗೂ ಇರುವ ವ್ಯತ್ಯಾಸದ ಅಂತರ ಬಹು‌ ದೂರದ್ದು. ವಿಶೇಷ ಎಂದರೆ ಈ ಅಕ್ಕಯ್ ಕೂಡ ಶ್ವೇತ ಭವನದ ಅತಿಥಿಯಾಗಿ ಹೋಗಿ ಬಂದ ಸಾಧನೆ ಮಾಡಿದ್ದಾರೆ. ಅವರ ಸಾಧನೆ ನನಗೆ ಹಾರ್ಟ್ ಮನ್ ಗಿಂತ ಎತ್ತರದ್ದು ಎಂದೆನ್ನಿಸುತ್ತದೆ. ಆತ ಮೀರಬೇಕಾದದ್ದು  ಕೇವಲ ಧೈಹಿಕ ಕೊರತೆಯೊಂದನ್ನು. ಆದರೆ ಅಕ್ಕಯ್ ಧೈಹಿಕ ಮತ್ತು ಸಾಮಜಿಕ ಸ್ವೀಕೃತಿ ( Social Sanction) ಎರಡನ್ನೂ ಜಯಿಸಬೇಕಿತ್ತು. She has been a bravo. ಅವರ ಜೀವನ ಕಥನ ಓದುವಾಗ ಇಡೀ ಪುಸ್ತಕದಲ್ಲಿ ಎಲ್ಲಾದರೂ ಒಂದು 'Stationary Space' ಸಿಗುತ್ತದಾ ಎಂದು ಬಹಳ ಕಾಯುತ್ತಿದ್ದೆ. ಆದರೆ ನಿರಂತರವಾಗಿ ಚಲಿಸುತ್ತಲೇ ಇದ್ದಾರೆ ಆಕೆ.  


ಈ ಪುಸ್ತಕದಲ್ಲಿ ಇಡೀ LGBTQ ಸಮುದಾಯವೇ ನಮ್ಮ ಕಣ್ಮುಂದೆ ಬರುತ್ತದೆ. ಇದು ಅಕ್ಕಯ್ ನ ಕಥೆ ಮಾತ್ರವಲ್ಲ. ಹಾಗೆ ನೋಡಿದರೆ ಇದು ಇಡೀ ಸಮಾಜದ ಕಥೆ. ಏಕೆಂದರೆ ಇದು ಶೋಷಣೆ , ಅಸಮಾನತೆ , ಕಿರುಕುಳ ಮತ್ತು ಪುರುಷಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸಲು ನಿಸರ್ಗ ಸಹಜ ಕಾರಣಗಳನ್ನು ನಮ್ಮ ಮುಂದಿಡುವ ಕಥೆ. ತಮ್ಮದಲ್ಲದ ತಪ್ಪಿಗೆ , ದೇಹದ ವಿಶಿಷ್ಟ ( ಅದೊಂದು ನ್ಯೂನ್ಯತೆ ಆಗಲಾರದು) ಸಂರಚನೆ ಮತ್ತು ಮಾನಸಿಕ ಸ್ಥಿತಿಯಿಂದಾಗಿ ಸಮಾಜದಿಂದ ಬಹಿಷ್ಕಾರಕ್ಕೆ ಒಳಗಾಗುವ  ಒಂದು ಸಮುದಾಯದ ಕಥೆ. ಅಕ್ಕಯ್ ನಲ್ಲಿರುವ ವೈಚಾರಿಕತೆ ಎಷ್ಟು ಪ್ರಖರವಾದದ್ದು ಎಂದರೆ ' ತೃತೀಯ ಲಿಂಗಿಗಳು' ಎಂಬ ಪದ ಬಳಕೆಗೆ ಆಕ್ಷೇಪ ವ್ಯಕ್ತ ಪಡಿಸುತ್ತಾ  ಮೊದಲ ಹಾಗೂ ದ್ವಿತೀಯ ಲಿಂಗಗಳು ಯಾವುವು  ಮತ್ತು ಯಾವ ಆಧಾರದಲ್ಲಿ ಅವು ಆ ಸ್ಥಾನವನ್ನು ಪಡೆಯುತ್ತವೆ ? ಎಂದು ಪ್ರಶ್ನಿಸುತ್ತಾರೆ. ಹೌದಲ್ಲವೆ ? 


ಇನ್ನು ಗಂಡೂ ಅಲ್ಲದ , ಹೆಣ್ಣೂ ಅಲ್ಲದ ಅಥವಾ ಗಂಡಾಗಿ ಹೆಣ್ಣಾಗ ಬಯಸುವ , ಹೆಣ್ಣಾಗಿಯೂ ಗಂಡಾಗ ಬಯಸುವ ಒಂದು ವರ್ಗ ಇಂದು ನಿನ್ನೆಯದೇನಲ್ಲ ಎಂಬುದನ್ನು ರಾಮಾಯಣ ,ಮಹಾಭಾರತ ಮತ್ತು ಇತಿಹಾಸಗಳಿಂದ ಉದಾಹರಿಸುವುದನ್ನು ನೋಡಿದರೆ ನನಗೆ ನಮ್ಮ ಭಾಷಾ ಲಿಂಗತ್ವದ ಬಗ್ಗೆ ಅನುಮಾನ ಮೂಡುತ್ತದೆ.‌ ಹಿಂದಿಯನ್ನೂ ಒಳಗೊಂಡಂತೆ ಕೆಲ ಭಾಷೆಗಳಲ್ಲಿ ಕೇವಲ ಎರಡೇ ಲಿಂಗಗಳಿವೆ.‌ ವಸ್ತುಗಳನ್ನೂ ಸ್ತ್ರೀಲಿಂಗ ,ಪುಲ್ಲಿಂಗಗಳಾಗಿ ವಿಭಾಗಿಸಲಾಗುತ್ತದೆ. ಇಂಗ್ಲಿಷ್ ಭಾಷೆಗೂ ಇಂಥ ಗ್ರಾಮ್ಯಾಟಿಕಲ್ ಜೆಂಡರ್ ಒಂದು ಕಾಲದಲ್ಲಿ ಇತ್ತು. ಆಮೇಲೆ ಅದನ್ನು ಕೈ ಬಿಡಲಾಯಿತು. Feminine ಮತ್ತು Masculine ಅಲ್ಲದ್ದನ್ನು ಗುರುತಿಸುವ ಅವಕಾಶವನ್ನು ಭಾಷೆಯೇ ಮೊದಲು ಕಳೆದು ಬಿಡುತ್ತದೆ. ವೈವಿಧ್ಯತೆಯನ್ನು ಗೌರವಿಸುವುದನ್ನು ಒಂದು ಸಮಾಜವಾಗಿ ನಾವು ಕಲಿಯದೇ ಇರುವುದು ನೋವಿನ ಸಂಗತಿ. 

' ಅವನು ಹೆಣ್ಣಿಗ ' ಎಂದಾಗ ಮತ್ತು ' ಅವಳು ಗಂಡು ಬೀರಿ' ಎಂದಾಗ ಎರಡೂ ಸಂದರ್ಭದಲ್ಲಿ 'ಹೆಣ್ಣ' ನ್ನೇ ದೂಷಿಸುತ್ತಿರುವುದು ಸ್ಪಷ್ಟ ಎಂಬುದನ್ನು ಸೂಕ್ಷ್ಮವಾಗಿ ನಾವು ಅರಿಯಬೇಕು. ಹಾಗೂ ಅದು ಅನೇಕ ಸಮಯದಲ್ಲಿ ' ಅಮ್ಮ, ಅಕ್ಕ, ಅತ್ತೆ,‌ ತಂಗಿ , ಅಜ್ಜಿ' ಇವರುಗಳಿಂದಲೇ ಆಗುತ್ತದೆಂಬುದೂ ಅಷ್ಟೆ ಸತ್ಯ. 


' Sex worker ' ಎಂಬ ಪದ ನಮ್ಮ ಕಿವಿಗೆ ಅಶ್ಲೀಲವಾಗಿ ಕೇಳುತ್ತದೆ ಎಂದಾದರೆ ಅವರಿಗೆ ನಾವು ಬೇರ್ಯಾವ ಕೆಲಸಗಳನ್ನು ನೀಡಲು ತಯಾರಿದ್ದೇವೆ ಎಂಬ ಆತ್ಮವಿಮರ್ಶೆ ಅತ್ಯಗತ್ಯ. ವೇಶ್ಯಾವಾಟಿಕೆ ಎಂಬ ಪದಕ್ಕೂ ಲೈಂಗಿಕ ಕಾರ್ಯಕರ್ತೆ(ರ್ತ) ಎನ್ನುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂಬುದನ್ನು ನಾವು ಗಮನಿಸಬೇಕು. ಬೇರೆಲ್ಲಾ ವಿಷಯಗಳಿಗೆ ಈ ಸಮುದಾಯವನ್ನು ತಿರಸ್ಕಾರ ಮತ್ತು ಬಹಿಷ್ಕಾರದಂತೆ ನೋಡುವ ಅದೇ ಸಮಾಜದ ಜನ ಲೈಂಗಿಕ ತೃಷೆಗಾಗಿ ಅವರ ಬಳಿ ಹೋಗುವುದು ಎಂಥ ವೈರುಧ್ಯ ಅಲ್ಲವೆ ? ಹಾಗಾಗಿಯೇ ನನಗನ್ನಿಸುತ್ತದೆ ಮನುಷ್ಯ ವಿಕಾಸವನ್ನು ನಾವು ಸಂಪೂರ್ಣವಾಗಿ ಇನ್ನೂ ಅರಿತಿಲ್ಲವೇನೋ ಎಂದು. ಸೆಕ್ಸ್  ಎಂಬುದು ಮೂಲತಃ ಮನುಷ್ಯನನ್ನು ಇತರೆಲ್ಲ ಜೀವಿಗಳಂತೆಯೇ ಪರಿಗಣಿಸಬೇಕೆಂದು ಮನವರಿಕೆ ಮಾಡುತ್ತದೆ. ಆದರೆ ಅನೇಕ ಸಾಮಾಜಿಕ ಕಟ್ಟಳೆಗಳನ್ನು ವಿಧಿಸಿಕೊಂಡಿರುವ ಮನುಷ್ಯ ತನ್ನ ಮೇಲೆ ಮಡಿವಂತಿಕೆಯನ್ನು ಹೇರಿಕೊಂಡಿದ್ದಾನಷ್ಟೆ. ಲೈಂಗಿಕ ವೃತ್ತಿಯಲ್ಲಿರುವಾಗ ಬಹಳಷ್ಟು ಮಂದಿ ಒಳ್ಳೆಯವರನ್ನು ಭೇಟಿಯಾಗಿದ್ದೇನೆ. ಅವರಲ್ಲಿ ಕೆಲವರು ಈಗಲೂ ಒಳ್ಳೆಯ ಸ್ನೇಹಿತರಾಗಿದ್ದಾರೆ ಎನ್ನುತ್ತಾರೆ ಅಕ್ಕಯ್. 


ಇಂದು ಅಕ್ಕಯ್ ಏನಾಗಿದ್ದಾರೋ ಅದಕ್ಕೆ ಅವರಲ್ಲಿರುವ 'ಹೋರಾಟಗಾರ್ತಿ'ಯೇ ಕಾರಣ. ಹಿಜ್ರಾ ಸಮುದಾಯದ ಒಳಗೇ ಅವರು ಅನೇಕ ಬಾರಿ ಪ್ರತಿಭಟಿಸಿದ್ದಾರೆ. ಯಾವುದು ಶೋಷಣೆಗೆ ಒಳಗಾದ ಸಮುದಾಯ ಎನ್ನುತ್ತೇವೋ ಅಲ್ಲಿಯೂ ಇರುವ ಸಂಪ್ರದಾಯದ ಯಜಮಾನಿಕೆಯನ್ನು ಅವರು ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ.  ಶೋಷಣೆ ಮತ್ತು ಅಸಮಾಧಾನವನ್ನು ಅವರು ಒಪ್ಪಿಕೊಳ್ಳುವುದೇ ಇಲ್ಲ. ಹಾಗಾಗಿಯೇ ತಮ್ಮ ಗಂಡನ ಹಿಂಸೆ ,ಕಿರುಕುಳದಿಂದಲೂ ಮುಕ್ತರಾಗಲು ಬಯಸುತ್ತಾರೆ.


"ನಾವು ಚಪ್ಪಾಳೆ ತಟ್ಟಿ ಒಂದು ರೂಪಾಯಿ ಭಿಕ್ಷೆ ಬೇಡುವುದು ನಮ್ಮಲ್ಲಿ ಹಣವಿಲ್ಲದ ಏಕೈಕ ಕಾರಣಕ್ಕಾಗಿ. ಹಣವನ್ನು ಬೇಡಿ ಪಡೆಯುವುದು ನಮ್ಮ ಹಕ್ಕು. ಇದು ಸಮಾಜದ ಮುಂದೆ ಪ್ರತಿಭಟಿಸುವ ವಿಧಾನವೂ ಹೌದು" ಎನ್ನುವ ಅಕ್ಕಯ್, ಅವರ ಮೂಲಭೂತ ಹೋರಾಟ ಇರುವುದು ಮಾನವ ಹಕ್ಕುಗಳಿಗಾಗಿ. ನಿಜ , ಅವರು ತಟ್ಟುವ ಚಪ್ಪಾಳೆ ಸದ್ದು ಸಮಾಜದ ವಿರುದ್ಧ ಅವರ ಪ್ರತಿಭಟನೆಯೇ ಆಗಿದೆ. 2009 ರ ಜುಲೈ 2ರ ದೆಹಲಿ ಹೈಕೋರ್ಟಿನ ತೀರ್ಪು ಖಾಸಗಿಯಾಗಿ ವಯಸ್ಕರ ನಡುವೆ ಸಹಮತದ ಸೆಕ್ಸ್ ಶಿಕ್ಷಾರ್ಹವಲ್ಲ ಎಂದು ಹೇಳಿತು. ಅಂದು ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕ ದಿನ ಎಂದು ಹೇಳುವ ಅಕ್ಕಯ್ ಇಂಥ ಕ್ರಿಯೆಯನ್ನು ಅಪರಾಧವೆಂದು ಪತಿಗಣಿಸುತ್ತಿದ್ದ ಸೆಕ್ಷನ್ 377 ನ್ನು ಮೆಕಾಲೆ ಜಾರಿಗೊಳಿಸಿದ ವಸಾಹತುಶಾಹಿ ನೆಲೆಯದ್ದು ಎನ್ನುತ್ತಾರೆ.  ಸಂತಾನೋತ್ಪತ್ತಿಯನ್ನು ಹೊರತುಪಡಿಸಿಯೂ ಲೈಂಗಿಕತೆಯೆನ್ನುವುದು ಅನ್ಯೋನ್ಯತೆ , ಸಂಬಂಧಗಳು ,ಕೆಲಸ , ಅಧಿಕಾರ/ಶಕ್ತಿ ...ಹೀಗೇ ಬಹುರೂಪಿಯಾದದ್ದು ಎಂಬ ಅವರ ಮಾತು ಎಷ್ಟು ಸತ್ಯ ! ಎಷ್ಟೋ ಜನ ಕಾವಿ ತೊಟ್ಟು ಸಂಸಾರ ತ್ಯಜಿಸಿದ ಸನ್ಯಾಸಿಗಳು ಖಾಸಗಿಯಾಗಿ ಸೆಕ್ಸ್ ನಲ್ಲಿ ಭಾಗಿಯಾದ ಪ್ರಕರಣಗಳು ನಮ್ಮ ಮುಂದಿರುವಾಗ ಅದನ್ನು ಕೇವಲ ಸಂತಾನೋತ್ಪತ್ತಿಗೆ ಬಳಸಬೇಕು ಎನ್ನುವುದು ಎಷ್ಟು ಅತಾರ್ಕಿಕವಾದುದಲ್ಲವೆ ? ಈ ನಿಟ್ಟಿನಲ್ಲಿ ಅವರ ಹೋರಾಟದ ಹಾದಿ ಮೆಚ್ಚುವಂತದ್ದು. 


ಅಮೇರಿಕಾದ ಪೊಲೀಸ್ ವ್ಯವಸ್ಥೆಗೆ ನೀಡಲಾಗಿರುವ ಅಪರಿಮಿತ ಅಧಿಕಾರವನ್ನು ಅಕ್ಕಯ್ ಆತಂಕದಿಂದ ನೋಡುತ್ತಾರೆ. ಸಾರ್ವಜನಿಕರ ಕೈಯಲ್ಲೂ ಬಂದೂಕು ಕೊಟ್ಟಿರುವ ಅಮೇರಿಕಾದಲ್ಲಿ LGBTQ ಸಮುದಾಯ ಭಯದಿಂದಲೇ ಇದೆ. ಇದು ಹೆಚ್ಚೆಚ್ಚು ಅಮೇರಿಕನ್ನರನ್ನು ನಾವು ಭೇಟಿ ಮಾಡಿದಾಗ ತಿಳಿಯುತ್ತದೆ ಎನ್ನುವ ಅವರು ಜಗತ್ತಿನ ಎಲ್ಲಾ  ರಾಷ್ಟ್ರಗಳೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೇ. ಅಮೇರಿಕ , ಭಾರತ, ಜಪಾನ್ ಹೀಗೆ ಎಲ್ಲಾ ದೇಶಗಳಲ್ಲೂ ಸಮಸ್ಯೆಗಳಿವೆ ಎನ್ನುವ ಅವರ ನಿಲುವನ್ನು ಒಪ್ಪದೇ ಇರಲಾಗದು.


ಅಕ್ಕಯ್ ತುಂಬಾ ಚೆಂದ ಸೀರೆ ಉಡುತ್ತಾರೆ ಎಂಬ ಕಾರಣಕ್ಕೆ ಅವರು ಸೀರೆ ಬ್ರಾಂಡಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಾಗ ಇದೇ ಸೀರೆಯ ಕಾರಣಕ್ಕೆ ತಾನು ಅನುಭವಿಸಿದ ಯಾತನೆಯನ್ನೂ ನೆನಪಿಸಿಕೊಳ್ಳುತ್ತಾರೆ. ಸೀರೆ ಉಟ್ಟರೆ ಹೊಡೆಯಲು ಬರುತ್ತಿದ್ದ ಅಪ್ಪ ಅಮ್ಮ ನಂತರದಲ್ಲಿ ಜೊತೆಯಾಗಿ ನಿಲ್ಲುವಂತೆ ಮಾಡುತ್ತಾರೆ ಅವರು. ಹೆಣ್ಣಾಗಬೇಕೆಂಬ ತಹತಹ ಈಡೇರಿದ ಮೇಲೆ ಹೆಣ್ಣು ಎದುರಿಸುವ ಕೌಟುಂಬಿಕ ಕಟ್ಟಳೆಗಳನ್ನೂ ಆಕೆ ಎದುರಿಸುತ್ತಾರೆ. ಇಲ್ಲಿ ಸಂಚಾರಿ ವಿಜಯ್ ಅಭಿನಯದ ನಾನು ಅವನಲ್ಲ ಅವಳು ಚಿತ್ರದ ' ಹೆಣ್ಣಾಗಿ ಹುಟ್ಟೋದು ಸುಲಭ. ಆದ್ರೆ ಹುಟ್ಟಿದ ಮೇಲೆ ಹೆಣ್ಣಾಗೋದು ಬಹಳ ಕಷ್ಟ' ಎಂಬ ಮಾತನ್ನು ನೆನೆಯಬೇಕು. ಅಕ್ಕಯ್ ಜೀವನವಿಡೀ ಈ ಪುರುಷಪ್ರಧಾನ ಶೋಷಣೆಯನ್ನು ಮೆಟ್ಟಿ ನಿಲ್ಲಲು ಪ್ರಯತ್ನಿಸಿದ್ದಾರೆ. ಅವರು History ಅಂದರೆ His- Story ( ಆತನ ಕಥೆ) ಯಾಗಿ ಮಾತ್ರ ಕಾಣಬೇಡಿ. ಅದನ್ನು Her- Story ಎಂದೂ ಕಾಣುವ ಅಗತ್ಯವಿದೆ ಎಂದು ಅಭಿಪ್ರಾಯ ಪಡುತ್ತಾರೆ. ಅದನ್ನು ಆಗುಮಾಡಿದ ಬಹುರೂಪಿ ಪ್ರಕಾಶನವೂ ಅಭಿನಂದನಾರ್ಹ.


ಅಕ್ಕಯ್ ಜೀವನ ಕಥನ ನಮ್ಮಲ್ಲಿ ಒಂದು ತಲ್ಲಣ  ತಂದೊಡ್ಡಿ ನಮ್ಮನ್ನು ಮತ್ತಷ್ಟು ವೈಚಾರಿಕವಾಗಿ ಆಲೋಚಿಸಲು ಹಚ್ಚುತ್ತದೆ. ಸಿದ್ಧ ಮಾದರಿಗಳ ಆಚೆ ನಿಂತು ನಮ್ಮ ಸುತ್ತ ನೋಡಲು ಪ್ರೇರೇಪಿಸುತ್ತದೆ. ಜಗತ್ತಿನ ಜೀವ ವೈವಿಧ್ಯತೆಯನ್ನು ಗೌರವಿಸಲು ಹೇಳಿ ಕೊಡುತ್ತದೆ. ಪೊಲೀಸರಿಂದ ದೂಷಣೆ , ಕಿರುಕುಳ ಎದುರಿಸಿದ ಅವರು ಪೊಲೀಸ್ ಅಕಾಡೆಮಿಗೆ ತರಬೇತಿ ನೀಡಲು ಹೋಗುವ ದಿನಗಳನ್ನು ನಮ್ಮ ಮುಂದಿಡುತ್ತದೆ. 


ಪುಸ್ತಕದ ಕೊನೆಯ ಪುಟದಲ್ಲಿ ಅಕ್ಕಯ್, ಶೋಷಿತರ ರಂಗಭೂಮಿ ( Theatre of the oppressed )ಯನ್ನು ವಿನ್ಯಾಸ ಗೊಳಿಸಿದ ಅಗಸ್ತೋ ಬೋಲ್ ನ ಮಾತೊಂದನ್ನು ಮುಂದಿಡುತ್ತಾರೆ. 

" ನೀವು ಪ್ರೇಕ್ಷಕರಂತೆ ನಟಿಸುತ್ತೀರಿ. ನೀವೇ ನಟರಾದಾಗ ನೀವು ಕಥೆಯನ್ನು ಹೇಳಲು ಶುರು ಮಾಡುತ್ತೀರಿ " 


ಪುಸ್ತಕ ಓದಿ ಮುಗಿಸುತ್ತಿದ್ದ  ಹೊತ್ತಲ್ಲಿ ಮೂರುವರೆ ವರ್ಷದ ನನ್ನ ಮಗ ಬಂದು ಪುಸ್ತಕದ ಮುಖಪುಟವನ್ನು ಮತ್ತು ಒಳ ಪುಟವನ್ನು ಎರೆಡೆರಡು ಬಾರಿ ನೋಡಿದ. ಒಳ ಪುಟಗಳ ಹೆಡ್ಡರ್ ನಲ್ಲಿರುವ ಅಕ್ಕಯ್ ರನ್ನು ತೋರಿಸಿ, ಮುಖಪುಟದ ಅಕ್ಕಯ್ ರನ್ನೂ ತೋರಿಸಿ 

' ಪಪ್ಪ, ಇವರು ಅವರೇನಾ ?' ಅಂದ. ' ಹೌದು,ಅವರೇ'  ಅಂದೆ.‌ ಹೆಡ್ಡರ್ ನ ಪೋಟೋ ತೋರಿಸುತ್ತ, ' ಅಲ್ಲ, ಇವ್ರು ಹುಡುಗ ಅಲ್ವಾ! ಹುಡುಗನ ಥರ ಕಟಿಂಗ್ ಇದೆ ' ಎಂದು ಮತ್ತೆ ಹೇಳಿದ. ಅದಕ್ಕೆ ನಾನು ' ಹಾಗೇನಿಲ್ಲಪ್ಪ, ಅವರು ಇದೇ ಆಂಟಿ. ಕಟಿಂಗ್ ಹಾಗೆ ಮಾಡಿಸಿದ್ದಾರೆ ಅಷ್ಟೆ. ಅವರೂ ಹಾಗೆ ಹೇರ್ ಕಟ್ ಮಾಡಿಸಿಕೊಳ್ಳಬೋದು ' ಅಂದೆ. ನನ್ನ ಮಾತನ್ನು ಅವನು ನಂಬಿದ ಹಾಗೆ ಕಂಡ. ಅಕ್ಕಯ್ ಪುಸ್ತಕ ನನ್ನಲ್ಲಿ ಮೂಡಿಸಿದ ಅರಿವು ಇಷ್ಟೆ. ಲಿಂಗಾಧಾರಿತವಾದ ತರತಮಗಳನ್ನು ಮೂಡಿಸುವಂಥ ಒಂದು ಮಾತನ್ನೂ ನಾವು ಮನೆಯಲ್ಲಿ ಆಡಬಾರದು. ನಮ್ಮ ನಮ್ಮ ಮನೆಗಳನ್ನು ನಾವು ಸಮಾಜಮುಖಿಯಾಗಿ‌ ರೂಪಿಸುವುದೇ ದೊಡ್ಡ ದೇಶಪ್ರೇಮವಾಗುತ್ತದೆ. ಆಗ ಮಾತ್ರ ನಾವು ಅಕ್ಕಯ್ ಮುಖ ಮಾಡಿರುವ " ನಾಳೆಗಳ " ನ್ನು ಕಾಣಲು ಸಾಧ್ಯವಾಗಬಹುದೇನೊ... ಇಲ್ಲವಾದಲ್ಲಿ ನಾವು ಪ್ರೇಕ್ಷಕರಂತೆ ನಟಿಸುತ್ತಲೇ ಇರುತ್ತೇವಷ್ಟೆ...


ಅಷ್ಟಕ್ಕೂ ನಾವು ಮರೆಯಲೇಬಾರದು ;

" Everyone is handicapped in some way "

-ಶಿವಕುಮಾರ ಮಾವಲಿ

4 Jul 2021

children's book in Kannada PDF | Kid's book in Kannada PDF | ಮಕ್ಕಳ ಪುಸ್ತಕಗಳು ಉಚಿತ ಡೌನ್ಲೋಡ್ ಪಿಡಿಎಫ್

 ಕನ್ನಡ ಮಕ್ಕಳ ಪುಸ್ತಕಗಳಿಗೆ ನಿಚ್ಚಿನ ತಾಣ, The best website to download the Kannada Children's book for FREE| These are the best children's book in Kannada.


ಪಟ್ಟಣದಲ್ಲಿಯ ಕೋಳಿ 



ಪುಕ್ಕಟ್ಟೆ ಗ್ರಂಥಾಲಯ - ಲೇ ಸಾರ ಸ್ಟೂಅರ್ಟ್

ಮಾರ್ಕೋನಿ ಕಾಮಿಕ್ ಕನ್ನಡ ಮಕ್ಕಳ ಪುಸ್ತಕ 

ಚಿನ್ನದ ಮೀನು ಕನ್ನಡ ಮಕ್ಕಳ ಪುಸ್ತಕ

ನಮ್ಮ ಕನ್ನಡ 

ಸೊವಿಯೆಂಟ್ ಮಕ್ಕಳ ಪುಸ್ತಕ - ರಷ್ಯಾನ್ ಪುಸ್ತಕ

* ಗಾಳಿಯನ್ನು ಗೆದ್ದ ಬಾಲಕ 

* ಎರಡು ಬೆಕ್ಕುಗಳ ಕಥೆ 

ಕಾಗುಣಿತ

* ಆಲೂಗಡ್ಡೆ ಎಲ್ಲಿಂದ ಬರುವವು?

* ಗೆರ್ಗ್'ಸ್ ಮೈಕ್ರೋಸ್ಕೋಪ್ 

* ಒಂದು ಚಿಕ್ಕ ಗಿಳಿಯ ಕಥೆ 

ಸಣ್ಣ ಕಥೆಗಳು

* ಕೆಂಪ್ ಜುಟ್ಟಿನ ಹುಂಜ 

* ಲಾರಿ ಬೇಕರ 

* ಅತ್ಯಂತ ಶಕ್ತಿವಂತರು 

ಮಕ್ಕಳ ಕಥೆಗಳು ಕನ್ನಡ 

* ಬಾಂಬ್ ಮ್ಯಾಟ್ ಜನರಲ್ 

* ಒಂದು ಆನೆಯ ಕಥೆ 




1 Jul 2021

ಕಾವೇರಿ ಹರಿದು ಬಂದ ದಾರಿ | Books on Kaveri river | Kannada ebook free download

 ದಕ್ಷಿಣ ಭಾರತದ ಸಾಂಸ್ಕೃತಿಕ ತೊಟ್ಟಿಲಾಗಿರುವ ಕಾವೇರಿ ತನ್ನ ಪಾತ್ರದುದ್ದಕ್ಕೂ ನೆಲವನ್ನು ಸಸ್ಯಶ್ಯಾಮಲೆಯನ್ನಾಗಿಸಿದೆ. ವಿಶಿಷ್ಟ ಜೀವಸಂಪನ್ಮೂಲವನ್ನು ಪೋಷಿಸಿದೆ, ಸಹಸ್ರಾರು ವರ್ಷಗಳಲ್ಲಿ ಕಾವೇರಿ ತನ್ನ ಬದುಕನ್ನೇ ಬದಲಾಯಿಸಿರುವ ವೈಜ್ಞಾನಿಕ ಸತ್ಯ ಕಲ್ಪನೆಯ ಕಥೆಗಿಂತಲೂ ರೋಮಾಂಚನಕಾರಿ . ಈ ನದಿ ದಡದಲ್ಲಿ ನಮ್ಮೆಲ್ಲ ಧಾರ್ಮಿಕ ನಂಬಿಕೆಗಳು ಗರಿಗಟ್ಟಿವೆ; ಪುರಾಣ ಪುಣ್ಯಕಥೆಗಳು ಅರಳಿವೆ; ಪೈರುಪಚ್ಚೆ ನಳನಳಿಸಿದೆ. ಇದು ಕೇವಲ ನೀರುಣಿಸುವ ಜಲರಾಶಿಯಲ್ಲ; ಜನಜೀವನದ ಉಸಿರು. ಭಾವಾತಿರೇಕದಿಂದ ಕಾವೇರಿಯನ್ನು ನೋಡುವ ಬದಲು ನಿಸರ್ಗದ ಈ ಸುಂದರ ಸೃಷ್ಟಿಯನ್ನು ಯಥಾವತ್ತಾಗಿ ನೋಡಿದರೂ ಮನಸ್ಸು ಅರಳೀತು. ಕಾವೇರಿ ಹರಿದು ಬಂದ ದಾರಿ ಕೃತಿ ಈ ನದಿಯ ಧಾರ್ಮಿಕ, ಸಾಮಾಜಿಕ , ರಾಜಕೀಯ ಹಿನ್ನೆಲೆಯನ್ನಷ್ಟೇ ಓದುಗರಿಗೆ ಒದಗಿಸುತ್ತಿಲ್ಲ; ಇದೊಂದು ವೈಜ್ಞಾನಿಕ ಸತ್ಯವನ್ನು ತೆರೆದಿಡುವ ಪ್ರಯತ್ನ . .

ಕಾವೇರಿ ಹರಿದು ಬಂದ ದಾರಿ - Download here

ಹರಿಯುವುದೇ ನದಿಯ ಧರ್ಮ , ಅದು ಜೀವಂತವಾಗಿರುವಂತೆ ನೋಡಿಕೊಳ್ಳಬೇಕಾದುದು ನಮ್ಮ ಧರ್ಮ, ಕಾವೇರಿ ನದಿ ಗಂಗಾ ನದಿಯಂತೆ ಮಾಲಿನ್ಯದ ಮಡುವಾಗಲು ಅವಕಾಶ ನೀಡಬಾರದು. ಇಲ್ಲಿ ನಮ್ಮ ಪ್ರಜ್ಞೆ ಎಚ್ಚರಗೊಳ್ಳಬೇಕು. ಈ ನದಿ ಹರಿಯುವ ದಾರಿಯುದ್ದಕ್ಕೂ ಅದು ಸೃಷ್ಟಿಸಿರುವ ಪ್ರೇಕ್ಷಣೀಯ ಸ್ಥಳಗಳ ಯಾದಿ ಮಾಡುತ್ತಾ ಹೋದರೆ ಅದೇ ಒಂದು ಬೃಹತ್ ಕೃತಿಯಾದೀತು. ತಲಕಾಡಿನ ಅದ್ಭುತ ಮರಳರಾಶಿಯ ಬಗ್ಗೆಯಾಗಲಿ, ಮೇಕೆದಾಟಿನ ನಿಸರ್ಗದ ಮನಮೋಹಕ ಶಿಲ್ಪದ ಬಗ್ಗೆಯಾಗಲಿ ನಮ್ಮ ಪ್ರವಾಸೋದ್ಯಮ ದೊಡ್ಡ ಕಾಳಜಿಯನ್ನೇನೂ ತೋರಿಸಿಲ್ಲ. ಅದರಲ್ಲಿನ ಭೂವೈಜ್ಞಾನಿಕ ಸತ್ಯವನ್ನೂ ಪ್ರಚಾರ ಮಾಡಿಲ್ಲ. ಟಿ. ಎಂ . ಸಿ. ಯ ಅಳತೆಗೋಲಿನಿಂದ ಕಾವೇರಿಯನ್ನು ಅಳೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಈ ಜೀವನದಿಯಲ್ಲಿ ಮಶೀರ್ ಮೀನುಗಳ ಸಂತತಿ ಕಣ್ಮರೆಯಾಗುತ್ತಿರುವ ಘೋರ ಸತ್ಯವನ್ನೇ ನಾವು ಮನಗಂಡಿಲ್ಲ. ಕಾವೇರಿಯನ್ನು ಭೌಗೋಳಿಕ ಸೀಮಾರೇಖೆಯಿಂದ ಮುಕ್ತಗೊಳಿಸಿ, ಅದು ನಮ್ಮೆಲ್ಲ ಜೀವನಾಡಿ ಎಂದು ಭಾವಿಸಿದರೆ ಮಾತ್ರ ಅಕ್ಕರೆ ಹುಟ್ಟಿತು.

ಈ ಸಂಕಲನದಲ್ಲಿ ಸೇರಿರುವ ಲೇಖನಗಳು ಕೆಲವು ಪತ್ರಿಕೆಗಳಲ್ಲಿ ಬೆಳಕುಕಂಡಿವೆ. ಮತ್ತೆ ಕೆಲವನ್ನು ಪ್ರಕಟಣೆಗೆಂದೇ ಕೋರಿ ಬರೆಸಲಾಗಿದೆ. ಸುಧಾ,ಪ್ರಜಾವಾಣಿ, ಕನ್ನಡಪ್ರಭ ಪತ್ರಿಕೆಗಳ ಸಂಪಾದಕರು ಆಯಾ ಪತ್ರಿಕೆಗಳಲ್ಲಿ ಬಂದ ಲೇಖನಗಳನ್ನು ಬಳಸಲು ಅನುಮತಿ ನೀಡಿ ಉಪಕರಿಸಿದ್ದಾರೆ. ಲೇಖಕರು ಕಾಳಜಿವಹಿಸಿ ಬರೆದುಕೊಟ್ಟಿದ್ದಾರೆ. ಇವರೆಲ್ಲರಿಗೂ ಕೃತಜ್ಞತೆಗಳು ಸಲ್ಲುತ್ತವೆ. 

- ಮೊದಲ ಮುದ್ರಣ ಪ್ರಕಟವಾದ ಹದಿನೈದು ವರ್ಷಗಳ ( 1997) ನಂತರ ಈಗ (2012) ಮರುಮುದ್ರಣವಾಗುತ್ತದೆ. ಈ ಅವಧಿಯಲ್ಲಿ ಕಾವೇರಿ ನದಿಯಲ್ಲಿ ಎಷ್ಟು ಟಿ. ಎಂ . ಸಿ . ನೀರು ಹರಿದಿದೆಯೋ ಲೆಕ್ಕ ಇಟ್ಟವರೇ ಹೇಳಬೇಕು. ಈ ಮರುಮುದ್ರಣದಲ್ಲಿ ಯಾವ ಲೇಖನವನ್ನೂ ಬದಲಾಯಿಸಿಲ್ಲ. ಅದರ ಬದಲು ಅನುಬಂಧದಲ್ಲಿ ಕಾವೇರಿ ನದಿ ನೀರಿನ ಹಂಚಿಕೆ ಕುರಿತಂತೆ ಇತ್ತೀಚಿಗಿನ ಬೆಳವಣಿಗೆಗಳನ್ನು , ಕೇಂದ್ರ ಸರ್ಕಾರದ ನಿಲುವನ್ನು ಪ್ರಸ್ವವಾಗಿ ದಾಖಲಿಸಿದೆ. ಸಹೃದಯ ಓದುಗರು ಇದನ್ನು ಗಮನಿಸಬೇಕಾಗಿ ಕೋರುವೆ. ಎರಡನೇ ಮುದ್ರಣವನ್ನು ಹೊರತಂದಿರುವ ಕೀರ್ತನ ಪ್ರಕಾಶನದ ಶ್ರೀ ಕುಲಕರ್ಣಿ ಅವರಿಗೆ ಮತ್ತು ಈ ಕೃತಿಯನ್ನು ಮುದ್ರಣಕ್ಕೆ ಸಿದ್ಧಪಡಿಸುವಲ್ಲಿ ನೆರವಾದ ಮಡದಿ ಎ .ಆರ್. ಅನ್ನಪೂರ್ಣಗೆ ನನ್ನ ವಂದನೆಗಳು ಸಲ್ಲುತ್ತವೆ.

- ಟಿ.ಆರ್ ಅನಂತರಾಮು.




15 May 2021

ಕ್ರಾಂತಿಕಾರಿ ಬಸವಣ್ಣ

ಬಸವಣ್ಣನವರ ಬಗ್ಗೆ ನಾವೆಲ್ಲರೂ ಪುಸ್ತಕಗಳನ್ನು, ಅಂಕಣಗಳನ್ನು ಓದಿರುತ್ತೇವೆ. ರಂಜಾನ್ ದರ್ಗಾ ಅವರು ಬರೆದ ಬಸವಣ್ಣ ಮತ್ತು ಅಂಬೇಡ್ಕರ್ ಎಂಬ ಪುಸ್ತಕದಲ್ಲಿ ಬಸವಣ್ಣನವರ ಕೆಲ ವಿಚಾರಗಳನ್ನು, ಕೆಲಸಗಳನ್ನು ಇವತ್ತಿನ ಪ್ರಜಾಪ್ರಭುತ್ವದ ಆಶಯಗಳೊಂದಿಗೆ ಸಮೀಕರಿಸಿ ಬರೆದ ಒಂದು ಅಧ್ಯಾಯ ಸಿಗುತ್ತದೆ. ಅದರಲ್ಲಿನ ಕೆಲ ಪ್ರಮುಖ ಅಂಶಗಳು ಹೀಗಿವೆ.

Image

"ದೇಶದ ಮೊದಲ ಏಕದೇವೋಪಾಸನಾ ಧರ್ಮ"

ಬಹುದೇವೋಪಾಸನೆಯ ಸನಾತನ ಧರ್ಮ, ತೀರ್ಥಂಕರರ ಜೈನ ಧರ್ಮ ಆಜ್ನೇಯವಾದಿ ಬೌದ್ಧ ಧರ್ಮ ಮತ್ತು ಆದಿವಾಸಿಗಳ ವಿವಿಧ ಸಂಪ್ರದಾಯಗಳು ಭಾರತದಲ್ಲಿ ಸಹಸ್ರಾರು ವರ್ಷಗಳಿಂದ ವಿವಿಧ ಜೀವನವಿಧಾನ ಗಳಿಂದ ಕೂಡಿದ ಸಮಾಜಗಳನ್ನು ಸೃಷ್ಟಿಸಿದ್ದರೂ ಏಕದೇವೋಪಾಸನೆಯ ಧರ್ಮದ ಸ್ಥಾಪನೆಯಾಗಿರಲಿಲ್ಲ.
ಭಾರತದ ಮೊದಲ ಏಕದೇವೋಪಾಸನೆಯ ಧರ್ಮವಾದ ಲಿಂಗವಂತ ಧರ್ಮ ಕನ್ನಡ ನಾಡಿನಲ್ಲಿ 12ನೇ ಶತಮಾನದಲ್ಲಿ ಜನ್ಮತಾಳಿತು. ಕನ್ನಡವನ್ನು ಧರ್ಮದ, ದರ್ಶನದ, ಶಾಸ್ತ್ರದ, ಕಾಯಕಜೀವಿಗಳ ಸಾಹಿತ್ಯದ ಮತ್ತು ಚಳವಳಿಯ ಭಾಷೆಯಾಗಿ ರೂಪಿಸಿದ ಕೀರ್ತಿ 12ನೇ ಶತಮಾನದ ಶರಣ ಸಂಕುಲಕ್ಕೆ ಸಲ್ಲುತ್ತದೆ.

"ಶರಣಸಂಕುಲ"

ವರ್ಗ, ವರ್ಣ, ಜಾತಿ ಮತ್ತು ಲಿಂಗಭೇದ ಗಳಿಂದ ಕೂಡಿದ ಸಮಾಜದಿಂದ ಜನಸಮುದಾಯವನ್ನು ಎತ್ತಿ ಸರ್ವ ವೇದಗಳನ್ನು ನಿರಾಕರಿಸುವ ಶರಣಸಂಕುಲವೆಂಬ ವಿಶಿಷ್ಟ ಸಮಾಜವನ್ನು ಬಸವಾದಿ ಶರಣರು ರೂಪಿಸಿದರು.
ಸಂಕುಲ ಎಂಬ ಪದದಲ್ಲಿ ಕುಲ ಬೇದ ವಿರುವುದಿಲ್ಲ. ಸರ್ವ ಸಮ್ಮತವೇ ಸಂಕುಲದ ಜೀವಾಳವಾಗಿದೆ. ಶರಣಸಂಕುಲದಲ್ಲಿ ಎರಡು ವಿಶೇಷ ಪದಗಳನ್ನು ಕಾಣಬಹುದು. ಒಕ್ಕ ಮಿಕ್ಕ ಮತ್ತು ಶಿವನ ಸೊಮ್ಮು. ಶರಣ ಸಂಕುಲಕ್ಕೆ ಕೊಟ್ಟು ಉಳಿದದ್ಕಕ್ಕೆ 'ಒಕ್ಕಮಿಕ್ಕ' ಎಂದರೆ, 'ಶಿವನ ಸೊಮ್ಮು' ಎಂದರೆ ಸಾಮಾಜಿಕ ನಿಧಿ ಎಂಬರ್ಥವಿದೆ.

"ಸಾಮಾಜಿಕ ನಿಧಿ"

ಶರಣಸಂಕುಲದಲ್ಲಿ ಯಾರು ಆರ್ಥಿಕ ಸಮಸ್ಯೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಬಸವಣ್ಣನವರು ಶಿವನಿಧಿಯನ್ನು ಸ್ಥಾಪಿಸಿದರು.ದೇವರ ಪ್ರತೀಕವಾದ ಸಕಲಜೀವಾತ್ಮರ ಸೇವೆಗೆ ದಾಸೋಹ ಎಂದು ಕರೆದರು. ಯೋಗ್ಯಉತ್ಪಾದನೆ,ಯೋಗ್ಯಬಳಕೆ, ಯೋಗ್ಯ ಸಾಮಾಜಿಕ ವಿತರಣಾ ವ್ಯವಸ್ಥೆ ಇರುವ ದೇಶದಲ್ಲಿ ಹಿಂಸೆ ತಾಂಡವ ಮಾಡುವುದಿಲ್ಲ ಎಂಬ ನಂಬಿಕೆ ಅವರದಾಗಿತ್ತು
ತನು-ಮನ-ಧನ, ಕಾಯಕ-ಪ್ರಸಾದ-ದಾಸೋಹ, ಉತ್ಪಾದನೆ-ಬಳಕೆ-ವಿತರಣೆ, ಗುರು-ಲಿಂಗ-ಜಂಗಮ, ಅರಿವು-ಸಂಸ್ಕಾರ-ಆಚಾರ ಎಂಬುವು ಆಂತರಿಕ ಸಂಬಂಧವನ್ನು ಹೊಂದಿವೆ. ಉದಾಹರಣೆಗೆ ತನುವಿಗೆ ಕಾಯಕದ ಸಂಬಂಧ ಬಂದಾಗ ಅದರ ಉತ್ಪಾದನೆಯಿಂದ ಬರುವ ಅರಿವು ಗುರುವಾಗುವುದು.

"ಕಾಯಕಜೀವಿಗಳ ಸಂಘಟನೆ"

ಜಗತ್ತಿನಲ್ಲಿ ಕಾಯಕಜೀವಿಗಳ ಸಂಘಟನೆ ಮಾಡಿದವರಲ್ಲಿ ಬಸವಣ್ಣನವರು ಮೊದಲಿಗರು. ಅಲ್ಲಿಯವರೆಗೆ ಜಗತ್ತಿನ ಯಾವುದೇ ಮೂಲೆಯಲ್ಲಿ ಕಾಯಕಜೀವಿಗಳ ಸಂಘಟನೆ ಯಾಗಿರಲಿಲ್ಲ. ಭಾರತದ ಸಮಾಜೋಧಾರ್ಮಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಕಾಯಕಜೀವಿಗಳಿಗೆ ಅಲ್ಲಿಯತನಕ ಯಾವುದೇ ಸ್ಥಾನವಿರಲಿಲ್ಲ.
ನಿರಂತರ ಶೋಷಣೆಯ ವಿರುದ್ಧ ಕಾಯಕಜೀವಿಗಳು ಒಂದಾಗುವುದು ಐತಿಹಾಸಿಕ ಅನಿವಾರ್ಯತೆಯಾಗಿದೆ ಎಂಬುದನ್ನು ಮಹಾನುಭಾವಿ ಬಸವಣ್ಣನವರಿಗೆ ಅರಿವಾಗದೆ ಇರಲಿಲ್ಲ. ಬಸವಣ್ಣನವರು ಈ ಅರಿವನ್ನು ಪಡೆದ ಬಗೆ ಅನುಪಮ ವಾಗಿದೆ.

"ದುಡಿಯುವ ಜನರ ಮೊದಲ ಸಿದ್ಧಾಂತ"

ಭಾರತದ ಇತಿಹಾಸದಲ್ಲಿ ಶೂದ್ರರ ಮತ್ತು ಅತಿ ಶೂದ್ರರಾದ ಪಂಚಮರ ಅನುಭವಕ್ಕೆ ಯಾವುದೇ ಬೆಲೆ ಇರಲಿಲ್ಲ. ಶ್ರಮಜೀವಿಗಳ ಅನುಭವದಿಂದ ಸೃಷ್ಟಿಯಾದ ಅನುಭವವೇ ಬಸವಾದ್ವೈತ ಎಂಬ ಸಿದ್ಧಾಂತ. ಈ ಅನುಭಾವವೇ ಶರಣರ ಆಧ್ಯಾತ್ಮ , ತತ್ವಜ್ಞಾನ ಮತ್ತು ದರ್ಶನ.
ವೈದಿಕರ ಅಧ್ಯಾತ್ಮ ಕಾಯಕಜೀವಿಗಳ ಸಿದ್ಧಾಂತದಿಂದ ಬಂದುದಲ್ಲ. ಆದರೆ ಶರಣರ ಅನುಭಾವ ಜನಸಮುದಾಯಗಳ ಕಾಯಕಗಳ ಮೂಲಕ ದಕ್ಕಿದ ಅನುಭವದಿಂದ ರೂಪುಗೊಂಡದ್ದಾಗಿದೆ. ಹೀಗೆ ಬಸವಣ್ಣನವರು ದುಡಿಯುವ ಜನರ ಅನುಭವದ ಆಧಾರದ ಮೇಲೆ ಹೊಸ ಜಗತ್ತಿನ ಸಿದ್ಧಾಂತವನ್ನು ರೂಪಿಸಿದರು.

"ಸಂಸತ್ತಿನ ಮೂಲ ಅನುಭವ ಮಂಟಪ"

ಬಸವಣ್ಣನವರು ಸಂಸತ್ತಿನ ಪರಿಕಲ್ಪನೆಯನ್ನು ಮೂಡಿಸಿದ ಮಹಾಜ್ಞಾನಿ. ಮಹಿಳೆಯರೂ ಸೇರಿದಂತೆ ದಲಿತ ಮೊದಲಾದ ವಿವಿಧ ಸಮಾಜಗಳ ಹಿನ್ನೆಲೆಯಿಂದ ಬಂದ ನಾಯಕರಾದ 770 ಅಮರಗಣಂಗಳ ಮೂಲಕ ಅನುಭವ ಮಂಟಪ ಎಂಬ ಸಮಾಜೋಧಾರ್ಮಿಕ ಸಂಸತ್ತಿನ ಮೂಲಕ ವಿಶ್ವದಲ್ಲಿ ಮೊದಲ ಬಾರಿಗೆ ಸಮೂಹ ನಾಯಕತ್ವ ಕಲ್ಪನೆ ಮೂಡಿಸಿದರು.

"ಸಮೂಹ ನಾಯಕತ್ವ"

ಅಲ್ಲಿಯ ತನಕ ರಾಜರುಗಳು ತುಂಬಿದ ಜಗತ್ತಿನಲ್ಲಿ ಸಮೂಹ ನಾಯಕತ್ವದ ಪ್ರಶ್ನೆಯಿರಲಿಲ್ಲ. ಆದರೆ ಅನುಭವಮಂಟಪದ 770 ಅಮರಗಣಂಗಳೇ ಸಮೂಹ ನಾಯಕರಾದರು. ಇಲ್ಲಿನ ಬಹುಪಾಲು ನಾಯಕರೆಲ್ಲ ವಿವಿಧ ಸಾಮಾಜಿಕ ಸ್ತರಗಳಿಂದ ಬಂದ ಕಾಯಕಜೀವಿಗಳ ಶರಣ ಶರಣೆಯರಾಗಿದ್ದರು. ಅನುಭವ ಮಂಟಪದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿತ್ತು.
ಬದುಕಿನ ಎಲ್ಲಾ ಆಗುಹೋಗುಗಳ ಚರ್ಚೆಯಾಗುತ್ತಿತ್ತು. ಶರಣರ ವಚನಗಳು ಅನುಭವ ಮಂಟಪದ ಮೂಸೆಯಲ್ಲಿ ಹಾಯ್ದು ಹೊರಬರುತ್ತಿದ್ದವು. ಅಂದರೆ 770 ಅಮರಗಣಂಗಳ ಒಪ್ಪಿಗೆ ಪಡೆದು ಮಸೂದೆಗಳು ಕಾಯ್ದೆಗಳಾಗುವ ಹಾಗೆ ವಚನಗಳು ಹೊರಗೆ ಬರುತ್ತಿದ್ದವು. ಈ ಕಾರಣದಿಂದಲೇ ವಚನಗಳು ವಚನ ಸವಿಂದಾನ ಎಂದು ಕರೆಯಿಸಿಕೊಂಡವು.

"ಚಳುವಳಿಯ ಜನಕ"

ಚಳುವಳಿಯ ಪ್ರಜ್ಞೆ ಇಲ್ಲದೆ ಶರಣಸಂಕುಲ ವನ್ನಾಗಲಿ ಅನುಭವ ಮಂಟಪ ವನ್ನಾಗಲಿ ಸೃಷ್ಟಿಸುವುದು ಸಾಧ್ಯವಿಲ್ಲ. ಯುದ್ಧಗಳ ಜಗತ್ತಿನಲ್ಲಿ ಶರಣರ ಸಹಾಯದೊಂದಿಗೆ ಚಳುವಳಿಯನ್ನು ಮೊದಲಿಗೆ ರೂಪಿಸಿದವರು ಬಸವಣ್ಣನವರು. ಈ ಚಳವಳಿಯ ಪ್ರಜ್ಞೆ ಯಿಂದಾಗಿಯೆ ಶರಣರು ಹೊಸ ಮಾನವೀಯ ವ್ಯವಸ್ಥೆ ರೂಪಿಸುವಲ್ಲಿ ತಲ್ಲೀನರಾದರು.

"ತುಳಿತಕ್ಕೊಳಗಾದವರಿಗೆ ಶಿಕ್ಷಣ"

ಬಸವಣ್ಣನವರು ವಯಸ್ಕರ,ಮಹಿಳೆಯರ, ದಲಿತರ,ಹಿಂದುಳಿದವರ ಒಟ್ಟಾರೆ ಕಾಯಕಜೀವಿಗಳ ಶಿಕ್ಷಣದ ಹರಿಕಾರರಾಗಿದ್ದಾರೆ. ಕಾಯಕಜೀವಿಗಳ ಶಿಕ್ಷಣ ಸಂಘಟನೆ & ಹೋರಾಟ, ವಚನ ಚಳುವಳಿಯ ಪ್ರಮುಖ ಅಂಶಗಳಾಗಿವೆ.ಬಸವಣ್ಣನವರು ಜನಸಮುದಾಯ ಸಂಘಟಿತರಾಗುವಂತೆ ಶಿಕ್ಷಣ ನೀಡಿದರು ಮತ್ತು ಹೋರಾಟಕ್ಕೆ ಪೂರಕವಾದ ಶರಣಸಂಕುಲದ ಸಂಘಟಿಸಿಸಿದರು.
ವೈಯಕ್ತಿಕ ಕಾಯಕದ ಅನುಭವದ ಮೂಲಕ ಸಾಮೂಹಿಕ ಅನುಭವದ ಎತ್ತರಕ್ಕೆ ಒಯ್ಯುವ ವಿಶಿಷ್ಟವಾದ ವಚನ ಸಾಹಿತ್ಯ ಪ್ರಕಾರವನ್ನು ಬಸವಣ್ಣನವರು ಸಾಮಾಜೀಕರಣಗೊಳಿಸಿದರು. ಮಹಿಳೆಯರು, ದಲಿತರು, ಹಿಂದುಳಿದವರು ಮತ್ತು ಎಲ್ಲಾ ಕಾಯಕಜೀವಿಗಳು ವಿಶ್ವದಲ್ಲಿ ಮೊದಲ ಬಾರಿಗೆ ಒಂದಾಗಿ ಸೃಷ್ಟಿಸಿದ ವಚನ ಸಾಹಿತ್ಯ, ಜಗತ್ತಿನ ದುಡಿಯುವ ವರ್ಗದ ಮೊದಲ ಸಾಹಿತ್ಯವಾಗಿದೆ.

"ಮಾನವ ಹಕ್ಕುಗಳ ಪ್ರತಿಪಾದಕ"

1948 ಡಿಸೆಂಬರ್ 10ರಂದು ವಿಶ್ವಸಂಸ್ಥೆ ಘೋಷಿಸಿದ ಮಾನವ ಹಕ್ಕುಗಳಲ್ಲಿನ ಎಲ್ಲಾ 30 ಅಂಶಗಳು ಬಸವಣ್ಣನವರ ವಚನಗಳಲ್ಲಿವೆ. ಬಸವಣ್ಣನವರು 12ನೇ ಶತಮಾನದಲ್ಲಿ ಮಾನವ ಹಕ್ಕುಗಳ ಪ್ರತಿಪಾದನೆ ಮಾಡುವುದರ ಮೂಲಕ ಸರ್ವೋದಯದ ಪರಿಕಲ್ಪನೆಯನ್ನು ಕೊಟ್ಟಿದ್ದಾರೆ.
ಬಸವಧರ್ಮದಲ್ಲಿ ಇಷ್ಟಲಿಂಗ ಧರಿಸಿದ ದಾಸೀಪುತ್ರರು, ವೇಶ್ಯಾಪುತ್ರರು ಮತ್ತು ರಾಜಪುತ್ರರು ಉಳಿದವರ ಹಾಗೆ ಸಮಾನ ಸ್ಥಾನಮಾನ ಮತ್ತು ಮರ್ಯಾದೆ ಯೋಗ್ಯರಾಗುತ್ತಾರೆ

"ಸಾಮಾಜಿಕ ನ್ಯಾಯದ ಪರುಷಕಟ್ಟೆ'

ಶರಣರ ಸಂಕುಲ ದೊಳಗೆ ವಿಶ್ವದ ಮೊದಲ ಸಾಮಾಜಿಕ ನಿಧಿಗೆ ಚಾಲನೆ ನೀಡಿದ ಕಲ್ಯಾಣದ ಪ್ರಧಾನಿ ಬಸವಣ್ಣನವರು ಕಲ್ಯಾಣದ ಪ್ರಜೆಗಳ ಸವಾಲುಗಳನ್ನು ಆಲಿಸಲು ಸಾಮಾಜಿಕ ನ್ಯಾಯದ ಪರುಷಕಟ್ಟೆಯನ್ನು ಸ್ಥಾಪಿಸಿದರು. ಅಹವಾಲು ಕೇಳುವುದಕ್ಕಾಗಿ ಕೂಡುವ ಧರ್ಮದರ್ಶನ ಕಟ್ಟೆಗೆ ಪರಶು ಕಟ್ಟೆಯಿಂದ ಕರೆದರು.
"ಸ್ವರ್ಗ-ನರಕ ಗಳಿಲ್ಲದ ಧರ್ಮ"
ಬಸವಧರ್ಮವು ಮೂಲತಃ ಮಾನವ ವಿಮೋಚನೆಯ ಚಳುವಳಿಯಾಗಿ ರೂಪುಗೊಂಡು ಲಿಂಗವಂತ ಧರ್ಮವಾಯಿತು. ಬಸವಧರ್ಮದಲ್ಲಿ ಸ್ವರ್ಗ-ನರಕ, ಪುಣ್ಯ ,ಪಾಪ, ಪುನರ್ಜನ್ಮ ಮೋಕ್ಷ ಮತ್ತು ಇವೆಲ್ಲವುಗಳ ತಾಯಿಬೇರಾದ ಕರ್ಮಸಿದ್ಧಾಂತಗಳಿಲ್ಲ.
ದಯೆಯೇ ಧರ್ಮದ ಮೂಲವಾಗಿದೆ.ಈ ಧರ್ಮದಲ್ಲಿ ದೇವರು ದಯೆಯ ರೂಪದಲ್ಲಿದ್ದಾನೆ. ದಯೆಯ ಮೂರ್ತಿ ಮಾಡಲಿಕ್ಕಾಗದು, ದಯೆಗೆ ಗುಡಿ ಕಟ್ಟಲಾಗದು. ದಯೆ ಎಂಬ ದೇವರಿಗೆ ನಮ್ಮ ದೇಹವೇ ದೇವಾಲಯವಾಗಿದೆ. ಜೀವಕಾರುಣ್ಯದಿಂದ ಕೂಡಿದ ಸಂವೇದನಾಶೀಲ ಮನುಷ್ಯರು ಮಾತ್ರ ತಮ್ಮ ಭಾವದಲ್ಲಿ ದೇವರನ್ನು ಕಾಣಬಲ್ಲರು.
ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಬಸವಧರ್ಮದಲ್ಲಿ ನಂಬಲಾಗಿದೆ. ಈ ಧರ್ಮದಲ್ಲಿ ಇರುವುದು ಕಾಯಕ ಸಿದ್ಧಾಂತ. ಕರ್ಮಸಿದ್ದಾಂತಕ್ಕೆ ಇಲ್ಲಿ ಯಾವ ಬೆಲೆಯೂ ಇಲ್ಲ. ದೇವರು ದಯಾ ರೂಪದಲ್ಲಿ ನಮ್ಮೊಳಗೆ ಇರುವುದರಿಂದ ಬಸವಧರ್ಮದಲ್ಲಿ ಮಂದಿರ, ಮೂರ್ತಿ ಮತ್ತು ಮೂರ್ತಿಪೂಜೆ ಇಲ್ಲ, ಮಠೀಯ ವ್ಯವಸ್ಥೆ ಇಲ್ಲ. ಸ್ವಾಮಿಗಳಿಲ್ಲ.

"ಪರ್ಯಾಯ ವ್ಯವಸ್ಥೆ "

ಬಸವಣ್ಣನವರು ವೈದಿಕ ವ್ಯವಸ್ಥೆಯ ಎಲ್ಲವನ್ನು ತಿರಸ್ಕರಿಸಿದರು. ಅದಕ್ಕೆ ಪರ್ಯಾಯವಾಗಿ ಹೊಸ ಮಾನವೀಯ ವ್ಯವಸ್ಥೆಯನ್ನು ಜಾರಿಗೊಳಿಸಿದರು. ಬಹುದೇವೋಪಾಸನೆ ಪರ್ಯಾಯವಾಗಿ ಏಕದೇವೋಪಾಸನೆ, ಸ್ಥಾವರಲಿಂಗಕ್ಕೆ ಪರ್ಯಾಯವಾಗಿ ಇಷ್ಟಲಿಂಗ, ಮಂದಿರಕ್ಕೆ ಪರ್ಯಾಯವಾಗಿ ಅನುಭವ ಮಂಟಪ, ಮಠಕ್ಕೆ ಪರ್ಯಾಯವಾಗಿ ಮಹಾಮನೆ..
ಸ್ವಾಮಿಗೆ ಪರ್ಯಾಯವಾಗಿ ತತ್ವ ಜಂಗಮ, ಕರ್ಮಸಿದ್ಧಾಂತಕ್ಕೆ ಪರ್ಯಾಯವಾಗಿ ಕಾಯಕ ಸಿದ್ಧಾಂತ, ಜಾತಿ ಭೇದ ಸಮಾಜಕ್ಕೆ ಪರ್ಯಾಯವಾಗಿ ಜಾತಿಸಂಕರ ಸಮಾಜ ಮುಂತಾದವು ಬಸವಣ್ಣನವರ ಪರ್ಯಾಯ ವ್ಯವಸ್ಥೆ ಅಂಶಗಳಾಗಿವೆ.

"ಮೂಢನಂಬಿಕೆಗೆ ವಿರೋಧ"

ವರ್ಣ,ಜಾತಿ,ಮೇಲು-ಕೀಳು, ಕಷ್ಟ-ಸುಖ,ಹೆಣ್ಣು-ಗಂಡು ಹೀಗೆ ಇವೆಲ್ಲದರ ನಿರ್ಧಾರ ಮಾಡುವುದು ಕರ್ಮಸಿದ್ದಾಂತವೇ ಆಗಿದೆ. ನಮ್ಮ ಬದುಕಿನ ಆಗುಹೋಗುಗಳಿಗೆಲ್ಲಾ ಅದೇ ಕಾರಣವಾಗಿದೆ ಎಂಬ ಭ್ರಮೆ ಇದೆ. ಜನಸಮುದಾಯವನ್ನು ದುರ್ಬಲಗೊಳಿಸುವ ಪಂಚಾಂಗ, ಶನಿಕಾಟ ಮತ್ತು ಮೂಢನಂಬಿಕೆಗಳನ್ನು ಬಸವಾದಿ ಶರಣರು ಪ್ರಬಲವಾಗಿ ವಿರೋಧಿಸಿದ್ದರು.

"ವ್ಯಕ್ತಿತ್ವ ವಿಕಸನ"

ಮಾನವರನ್ನು ವಿಚಾರವಾದಕ್ಕೆಳೆದು ಅವರ ವ್ಯಕ್ತಿತ್ವ ವಿಕಸನ ಗೊಳಿಸುವುದೇ ಬಸವಣ್ಣನವರ ಗುರಿಯಾಗಿತ್ತು. ವೈದಿಕ ವ್ಯವಸ್ಥೆ ನಿರ್ಮಿಸಿದ ಜಾತಿ, ವರ್ಣಗಳ ಕಟ್ಟಳೆಗಳನ್ನು ತೆಗೆದುಹಾಕಿ, ಕಾಯಕ ಜೀವಿಗಳಿಗೆ ಜಾತಿ ಮತ್ತು ಅಸ್ಪೃಶ್ಯತೆಯ ಮೂಲಕ ಹಾಕಿದ್ದ ನಿಗೂಢ ಆರ್ಥಿಕ ದಿಗ್ಬಂಧನವನ್ನು ಕಿತ್ತೆಸೆಯುವುದೇ ಧ್ಯೇಯವಾಗಿತ್ತು.
@kodlady
Get Kannada Audio Books here
close
×

BIMBA STUDIO

Buy Any 2 Kurtis & Save ₹480

Use this exclusive offer for blog readers.

Claim Offer →