17 Aug 2018

ವಾಜಪೇಯಿ: ಶಂಕರ್ ಎನ್

ವಾಜಪೇಯಿ ತೀರಿಕೊಂಡ ಕೂಡಲೇ ಅವರ ಬಲಪಂಥೀಯ ಅನುಯಾಯಿಗಳು ಬಿಡಿ, ನಮ್ಮ ಪ್ರಗತಿಪರರೂ ಅವರ ವ್ಯಕ್ತಿತ್ವಕ್ಕೆ ‘ಅಜಾತಶತ್ರು, ಮುತ್ಸದ್ದಿ’ ಇತ್ಯಾದಿ ಬಿರುದುಗಳನ್ನು ತೊಡಿಸಿ ಮೈ ಮರೆಯುತ್ತಿದ್ದಾರೆ. ಬಹುಶಃ ಮೈತ್ರಿ ಸರ್ಕಾರವನ್ನು ವಾಜಪೇಯಿ ಸ್ನೇಹಮಯವಾಗಿ ನಿಭಾಯಿಸಿದ ರೀತಿ, ಅವರ ವಾಕ್ಪಟುತ್ವವೇ ಮುಂತಾದ ಪ್ರಸಿದ್ಧ ಗುಣಗಳು ಈ ಅಭಿಮಾನಿ ಗಣವನ್ನು ಗೊಂದಲದಲ್ಲಿ ಕೆಡವಿರಬಹುದು. ಅದಕ್ಕೇ ‘ತಪ್ಪು ಪಕ್ಷದಲ್ಲಿ ಸಿಲುಕಿಕೊಂಡಿರುವ ಧೀಮಂತ ನಾಯಕ’ ಎಂದು ಅವರನ್ನು ಅಳುಕಿಲ್ಲದೆ ಹೊಗಳಲು ಮುಂದಾಗುತ್ತಾರೆ. 2002ರ ಗುಜರಾತ್ ನರಮೇಧದ ಸಂದರ್ಭದಲ್ಲಿ ಮೋದಿಯವರಿಗೆ ‘ರಾಜಧರ್ಮ ಪಾಲಿಸಿ’ ಎಂದು ಕಿವಿ ಹಿಂಡಿದ್ದು ಹಾಗೂ ಆಗಿಂದಾಗಲೇ ಮೋದಿಯವರ ರಾಜೀನಾಮೆ ಪಡೆಯಲು ಪಟ್ಟು ಹಿಡಿದಿದ್ದೂ ವಾಜಪೇಯಿಯವರಿಗೆ ‘ಉದಾರವಾದಿ ಜಾತ್ಯತೀತ’ ಹೊಳಪು ತಂದುಕೊಟ್ಟಿದ್ದರೆ ಆಶ್ಚರ್ಯವಿಲ್ಲ. ಆದರೆ ಅಡ್ವಾಣಿ ಮತ್ತು ಅರುಣ್ ಜೇಟ್ಲಿಯವರ ಹಟ ಹಾಗೂ ತಂತ್ರಗಳಿಂದಾಗಿ ಬಿಜೆಪಿ ಕಾರ್ಯಕಾರಣಿಯ ಗೋವಾ ಸಭೆಯ ಸಂದರ್ಭದಲ್ಲಿ ಮೋದಿ ಉಳಿದುಕೊಂಡಿದ್ದೇನೋ ಹೌದು. ಆದರೆ ಅದೇ ಪಣಜಿ ಸಭೆಯಲ್ಲಿ ಅಟಲ್ಜೀವ ಮಾಡಿದ ಭಾಷಣ ಅವರ ನಿಜ ಬೇರುಗಳನ್ನು ಬೆತ್ತಲು ಮಾಡಿತ್ತು. ಆ ಮಾತುಗಳು ‘ನಾನು ಪ್ರಧಾನಿಯಾಗಬಹುದು, ಮಾಜಿಯೂ ಆಗಬಹುದು, ಆದರೆ ನಾನು ಸದಾ ಸ್ವಯಂಸೇವಕನೇ’ ಎಂದು ಹಿಂದೊಮ್ಮೆ ಹೇಳಿಕೊಂಡಿದ್ದ ವಾಜಪೇಯಿಯವರ ಮೂಲ ಸಂಘ ಪರಿವಾರ ಮನಃಸ್ಥಿತಿಗೆ ಮತ್ತೊಮ್ಮೆ ಒದಗಿ ಬಂದ ಪುರಾವೆಯಾಗಿದ್ದವು. ಸಂಘ ಪರಿವಾರದ ಕೋಮುವಾದಿ ವಿಷವೇ ಈ ನಾಯಕನ ಧಮನಿಗಳಲ್ಲಿಯೂ ಹರಿಯುತ್ತಿದ್ದ ರಕ್ತ ಎಂಬುದಕ್ಕೆ ಆ ಭಾಷಣ ನಿಸ್ಸಂದಿಗ್ಧ ಸಾಕ್ಷಿಯಾಗಿತ್ತು:
‘ಜಗತ್ತಿನಲ್ಲಿ ಎಲ್ಲೆಲ್ಲಿ ಮುಸ್ಲಿಮರು ಬದುಕಿದ್ದಾರೋ, ಅಲ್ಲೆಲ್ಲೂ ಅವರು ಇತರರೊಂದಿಗೆ ಕೂಡಿ ಬಾಳಲು ತಯಾರಿಲ್ಲ. ಬೇರೆಯವರೊಂದಿಗೆ ಬೆರೆಯಲು ಅವರಿಗೆ ಮನಸ್ಸಿಲ್ಲ. ಶಾಂತಿ ಮಾರ್ಗದ ಬದಲು ಅವರು ಬೆದರಿಕೆ ಹಾಗೂ ಭಯೋತ್ಪಾದನೆ ಮೂಲಕವೇ ಮತಪ್ರಚಾರ ಮಾಡಬಯಸುತ್ತಾರೆ. ಇಡೀ ಜಗತ್ತು ಮುಸ್ಲಿಮರು ಒಡ್ಡಿರುವ ಅಪಾಯಕ್ಕೆ ಜಾಗೃತವಾಗಿದೆ....’ (12 ಏಪ್ರಿಲ್ 2002)- ಇದು “ಉನ್ನತ ನಾಯಕ, ಬಿಜೆಪಿಯ ಮಾನವೀಯ ಮುಖ” ಕವಿಪುಂಗವ ವಾಜಪೇಯಿಯವರ ಧಾಟಿ! ಆ ಕಾರಣಕ್ಕೇ ಮೊದಲಿಗೆ ಮೋದಿಯವರ ರಾಜೀನಾಮೆ ಬಯಸಿದ್ದ ವಾಜಪೇಯಿ, ಬರಬರುತ್ತ ಮೋದಿಯವರ ಸಮರ್ಥನೆಯಲ್ಲಿ ತೊಡಗಿದ್ದು ಅಚ್ಚರಿ ಹುಟ್ಟಿಸುವುದಿಲ್ಲ.
ಬಾಬ್ರಿ ಮಸೀದಿ ಧ್ವಂಸವಾದ ದಿನ ಅಟಲ್ಜೀ್ ಅಯೋಧ್ಯೆಯಲ್ಲಿ ಇರದಿದ್ದರೂ ಹಿಂದಿನ ದಿನ ಲಕ್ನೋದಲ್ಲಿ ‘ಅಯೋಧ್ಯೆಯ ಕೆಲ ಭಾಗಗಳ ನೆಲಸಮಕ್ಕೆ ಕೋರ್ಟ್ ಒಪ್ಪಿಗೆಯಿದೆ’ ಎಂಬ ಭಾಷಣ ಬಿಗಿದು ಧ್ವಂಸಕ್ಕೆ ಪ್ರೇರಣೆ ಕೊಟ್ಟಿದ್ದರು. ಕರಸೇವೆಯನ್ನು ಯಾವ ಕೋರ್ಟ್ ಆದೇಶವೂ ತಡೆಯಲಾರದು ಎಂದಿದ್ದ ಅವರ ವೀರಾವೇಶದ ಭಾಷಣ ಈಗಲೂ ಯೂಟ್ಯೂಬ್ನನಲ್ಲಿ ನೋಡಲು ಸಿಕ್ಕುತ್ತದೆ.
ಇನ್ನು ‘ನಾನು ಜಾತ್ಯತೀತ’ ಎಂದು ಹಿಂಜರಿಯದೆ ಘೋಷಿಸುತ್ತಿದ್ದ ವಾಜಪೇಯಿ ತೀರಿಕೊಂಡಾಗ ಅವರಿಗೆ 93 ವರ್ಷಗಳ ತುಂಬು ಪ್ರಾಯ. ಆದರೆ ಆ 93 ವರ್ಷಗಳಲ್ಲಿ ಒಮ್ಮೆಯೂ, 18 ಕೋಟಿಯಷ್ಟಿರುವ ದೇಶದ ಮುಸ್ಲಿಮರಾಗಲೀ, ಎಂಟೂವರೆ ಕೋಟಿಯಷ್ಟಿರುವ ಕ್ರೈಸ್ತರಾಗಲೀ ಈ ದೇಶದ ಸಹಜ ಪ್ರಜೆಗಳೆಂದು ಮನಸಾ ದೃಢಪಡಿಸುವ ಒಂದೇ ಒಂದು ಮಾತು ಅವರ ಬಾಯಿಂದ ಬರಲಿಲ್ಲ. ಇದು ಈ ಭಾರತರತ್ನ ಬಿರುದಾಂಕಿತ ಜೀವದ ತಿರುಳು.
ಸಂಘ ಪರಿವಾರದ ನಿಲುವುಗಳಿಗೆ ಅನುಗುಣವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ಪಿತಪ್ಪಿಯೂ ಪಾಲ್ಗೊಳ್ಳದ ವಾಜಪೇಯಿ, ಭಾರತದ ಸಾರ್ವಜನಿಕ ಜೀವನ ಕಂಡ ಅಗ್ರಗಣ್ಯ ಧುರೀಣರಲ್ಲೊಬ್ಬರು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಅವರೆಂದೂ ನನ್ನ ಪಾಲಿನ ರಾಷ್ಟ್ರನಾಯಕರಾಗಲಾರರು. ಬಹುಸಂಸ್ಕೃತಿಯ ಭಾರತದ ಜೀವಾಳವನ್ನು ಒಪ್ಪಿ ಗೌರವಿಸದವರನ್ನು ‘ರಾಷ್ಟ್ರನಾಯಕ’ ಎಂದು ಹೇಗೆ ತಾನೇ ಒಪ್ಪಲು ಸಾಧ್ಯ?
close